ಗುಂಡ್ಮಿ(ಬ್ರಹ್ಮಾವರ): ರಂಗಕರ್ಮಿ ದಿ. ಗೋಪಾಲಕೃಷ್ಣ ನಾಯರಿ ಅವರ ನಾಟಕದ ಪಾತ್ರಗಳು ಸ್ವರ್ಗದಿಂದ ಇಳಿಯುವುದಿಲ್ಲ, ಬದಲಾಗಿ ಪಾತಾಳ ದಿಂದ ಉದ್ಭವಿಸುತ್ತವೆ ಎಂದು ಅಂತರ ರಾಷ್ಟ್ರೀಯ ಖ್ಯಾತಿಯ ರಂಗನಿರ್ದೇಶಕ ಸುರೇಶ ಆನಗಳ್ಳಿ ಹೇಳಿದರು.
ಗುಂಡ್ಮಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ಈಚೆಗೆ ಅಗಲಿದ ಖ್ಯಾತಿಯ ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿ ಅವರ ಕೊನೆಯ ನಿರ್ದೇಶನದ, ಬೆಂಗಳೂರು ಸಮಸ್ತರು ರಂಗಸಂಶೋಧನಾ ಕೇಂದ್ರ ದವರು ಅಭಿನಯಿಸಿದ ಬಡಗುತಿಟ್ಟು ಯಕ್ಷಗಾನ ಪ್ರಯೋಗ ಏವಂ ಅರ್ಜುನ ಇದರ ಪ್ರಥಮ ಪ್ರದರ್ಶನವನ್ನು ಉದ್ಘಾಟಿಸಿದರು.
ಸಾಂಪ್ರದಾಯಿಕ ಸಂಸ್ಕೃತ ನಾಟಕಗಳಿಗಿಂತ ಭಿನ್ನ ಆಲೋಚನೆಯಲ್ಲಿ ನಾಟಕವನ್ನು ಬರೆಯುವ ಭಾಸನ ನಾಟಕಗಳಿಗೆ ಜೀವತುಂಬುತ್ತ, ನಮ್ಮ ನಡುವೆ ಇರುವ ಕ್ರಿಯಾ ವಿಧಿಗಳನ್ನೇ ಬಳಸಿಕೊಂಡು ಅವರದೇ ಆದ ಶೈಲಿಯಲ್ಲಿ ನಾಯರಿ ಅವರು ನಾಟಕ ಗಳನ್ನು ಕಟ್ಟುತ್ತಾ ಬಂದಿದ್ದಾರೆ. ಅವರ ವ್ಯಕ್ತಿತ್ವ, ಸೃಜನಶೀಲತೆ ಹಾಗೂ ಸ್ನೇಹ ಪರತೆ ಬಹಳ ವಿಶಿಷ್ಟವಾದುದು. ಅವರ ನಿಧನದಿಂದಾಗಿ ವಿಭಿನ್ನ ಶೈಲಿಯ ರಂಗ ನಿರ್ದೇಶಕನನ್ನು ಭಾರತೀಯ ರಂಗ ಭೂಮಿ ಕಳೆದುಕೊಂಡಿತು ಎಂದರು.
ಗುಂಡ್ಮಿ ಕಲಾಕೇಂದ್ರದ ಸಂಚಾಲಕ ಐರೋಡಿ ರಾಜಶೇಖರ ಹೆಬ್ಬಾರ್ ಶುಭ ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ್ ಸ್ವಾಗತಿಸಿದರು. ಏವಂ ಅರ್ಜುನದ ಸಹ ನಿರ್ದೇಶಕಿ ಸುಧಾ ಮಣೂರು ವಂದಿಸಿದರು. ದಾಸು ನಾಯರಿ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.