ADVERTISEMENT

8 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆನಾಶ

ಅತಿಯಾದ ಮಳೆಯಿಂದ ಕೊಳೆರೋಗ: ಇಳುವರಿ ಕುಸಿತ ಸಾಧ್ಯತೆ, ರೈತರಿಗೆ ಹೊಡೆತ

ನವೀನ್‌ಕುಮಾರ್ ಜಿ
Published 14 ಅಕ್ಟೋಬರ್ 2025, 6:57 IST
Last Updated 14 ಅಕ್ಟೋಬರ್ 2025, 6:57 IST
ಕೊಳೆರೋಗದಿಂದ ಅಡಿಕೆ ಮರದ ಬುಡಕ್ಕೆ ಉದುರಿದ್ದ ಎಳೆ ಅಡಿಕೆ
ಕೊಳೆರೋಗದಿಂದ ಅಡಿಕೆ ಮರದ ಬುಡಕ್ಕೆ ಉದುರಿದ್ದ ಎಳೆ ಅಡಿಕೆ   

ಉಡುಪಿ: ಅತಿವೃಷ್ಟಿಯ ಪರಿಣಾಮವಾಗಿ ರೋಗಭಾದೆಯಿಂದ ಈ ಬಾರಿ ಜಿಲ್ಲೆಯಲ್ಲಿ 8 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆ ನಾಶವಾಗಿ ರೈತರಿಗೆ ಹೊಡೆತ ಬಿದ್ದಿದೆ.

ಜಿಲ್ಲೆಯಲ್ಲಿ ಒಟ್ಟು 23,500 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಕೃಷಿ ಇದ್ದು, ಅದರಲ್ಲಿ ಶೇ 33 ರಷ್ಟು ಬೆಳೆನಷ್ಟ ಉಂಟಾಗಿದೆ ಎಂದು ತೋಟಗಾರಿಕೆ ಇಲಾಖೆಯ ಮೂಲಗಳು ಹೇಳಿವೆ.

ಈ ಬಾರಿ ಮೇ ತಿಂಗಳಲ್ಲಿ ಆರಂಭವಾದ ಮಳೆ ನಿರಂತರವಾಗಿ ಸುರಿದ ಪರಿಣಾಮವಾಗಿ ಅಡಿಕೆ ಗೊನೆಗಳಿಗೆ ಬೋರ್ಡೊ ದ್ರಾವಣ ಸಿಂಪಡಿಸಲು ಸಾಧ್ಯವಾಗದೆ ಕೊಳೆರೋಗವು ಉಲ್ಬಣಗೊಂಡಿತ್ತು. ಅಡಿಕೆ ಮರದ ಬುಡಕ್ಕೆ ರಾಶಿ ರಾಶಿ ಎಳೆ ಅಡಿಕೆಗಳು ಉದುರಿ ಬಿದ್ಧಿದ್ದವು.

ADVERTISEMENT

ಮೇ ತಿಂಗಳಲ್ಲಿ 70 ಸೆಂ.ಮೀ.ಗಿಂತಲೂ ಹೆಚ್ಚು ಮಳೆ ಸುರಿದಿತ್ತು. ವಾಡಿಕೆಗಿಂತ ನಾಲ್ಕು ಪಟ್ಟು ಹೆಚ್ಚು ಮಳೆ ಸುರಿದಿದ್ದರಿಂದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಪೂರ್ವ ತಯಾರಿ ನಡೆಸಲು ಸಾಧ್ಯವಾಗಿರಲಿಲ್ಲ.

ಜಿಲ್ಲೆಯಲ್ಲಿ ಕಾರ್ಕಳ, ಹೆಬ್ರಿ, ಬೈಂದೂರು ಸೇರಿದಂತೆ ವಿವಿಧ ಪ್ರದೇಶದಲ್ಲಿ ಅಡಿಕೆಯನ್ನೇ ನೆಚ್ಚಿರುವ ನೂರಾರು ರೈತರಿದ್ದಾರೆ. ಕೊಳೆ ರೋಗದ ಹಾವಳಿಯಿಂದಾಗಿ ಇಳುವರಿ ಕುಸಿತದ ಭೀತಿಯಲ್ಲಿ ಈ ರೈತರಿದ್ದಾರೆ.

ಈ ವರ್ಷ ಅಡಿಕೆ ಬೆಳೆಯಲ್ಲಿ ಉತ್ತಮ ಫಸಲು ಬಂದಿತ್ತು ಆದರೆ. ಕೊಳೆರೋಗದಿಂದ ಅಡಿಕೆ ಉದುರಿ ಹೋಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುತ್ತಾರೆ ಬಹುತೇಕ ರೈತರು.

ನಿರಂತರ ಮಳೆಯ ಜೊತೆ ಅಡಿಕೆ ಮರ ಹತ್ತುವ ಕಾರ್ಮಿಕರ ಕೊರತೆಯಿಂದಾಗಿಯೂ ಹಲವೆಡೆ ಬೋರ್ಡೊ ದ್ರಾವಣ ಸಿಂಪಡಿಸಲು ಸಾಧ್ಯವಾಗಿರಲಿಲ್ಲ ಎನ್ನುತ್ತಾರೆ ಅಡಿಕೆ ಬೆಳೆಗಾರರು.

‘ಹಗಲು ಹೊತ್ತಿನಲ್ಲಿ ಮಳೆ ಬಿಡುವು ನೀಡಿದರೆ ಅಡಿಕೆ ಗೊನೆಗಳಿಗೆ ಬೋರ್ಡೊ ದ್ರಾವಣ ಸಿಂಪಡಿಸಲು ಸಾಧ್ಯವಾಗುತ್ತದೆ. ಆದರೆ ಮಳೆಗಾಲದಲ್ಲಿ 50 ದಿನಗಳ ಕಾಲ ನಿರಂತರ ಮಳೆ ಸುರಿದಿತ್ತು. ಇದರಿಂದಾಗಿ ಬಹುತೇಕ ಅಡಿಕೆ ಬೆಳೆಗಾರರಿಗೆ ತಮ್ಮ ಅಡಿಕೆ ತೋಟಗಳಿಗೆ ಬೋರ್ಡೊ ದ್ರಾವಣ ಸಿಂಪಡಿಸಲು ಸಾಧ್ಯವಾಗಿರಲಿಲ್ಲ. ಇದು ಈ ವರ್ಷ ಕೊಳೆರೋಗ ಉಲ್ಬಣಗೊಳ್ಳಲು ಕಾರಣವಾಗಿತ್ತು’ ಎನ್ನುತ್ತಾರೆ ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್‌.

‘ಕಳೆದ ಐದು ವರ್ಷಗಳಲ್ಲಿ ಕೊಳೆರೋಗದಿಂದ ಅಡಿಕೆ ತೋಟಕ್ಕೆ ಈ ಬಾರಿಯಷ್ಟು ಹಾನಿ ಸಂಭವಿಸಿರಲಿಲ್ಲ. ಈ ಸಲ ಬೋರ್ಡೊ ದ್ರಾವಣ ಸಿಂಪಡಿಸಿದ ಅಡಿಕೆ ತೋಟಗಳಲ್ಲೂ ಕೊಳೆರೋಗದ ಹಾವಳಿ ಇತ್ತು. ಮಳೆಯ ತೀವ್ರತೆ ಹೇಚ್ಚಾಗಿದ್ದ ಕಾರಣ ಬೋರ್ಡೊ ದ್ರಾವಣದ ತೀವ್ರತೆ ಕಡಿಮೆಯಾಗಿತ್ತು. ಇದರಿಂದಾಗಿ ಅಡಿಕೆ ಉದುರಿ ಬಿದ್ದು ಬೆಳೆ ನಷ್ಟ ಉಂಟಾಗಿತ್ತು’ ಎನ್ನುತ್ತಾರೆ ಕಾರ್ಕಳದ ಅಡಿಕೆ ಬೆಳೆಗಾರ ಶೈಲೇಶ್‌ ಮರಾಠೆ.

‘ಪ್ರತಿ ವರ್ಷ ನಾವು ಜೂನ್‌ ತಿಂಗಳ ಕೊನೆಗೆ ಅಡಿಕೆ ತೋಟಕ್ಕೆ ಬೋರ್ಡೊ ದ್ರಾವಣ ಸಿಂಪಡಿಸುತ್ತಿದ್ದೆವು. ಆದರೆ ಈ ಬಾರಿ ಮೇ ತಿಂಗಳಲ್ಲೇ ಮಳೆ ಆರಂಭವಾಗಿದ್ದರಿಂದ ಜೂನ್‌ ಆರಂಭದಲ್ಲೇ ಬೋರ್ಡೊ ದ್ರಾವಣ ಸಿಂಪಡಿಸಿದ್ದೆವು. ಆದರೂ ಕೊಳೆರೋಗದಿಂದ ಎಳೆ ಅಡಿಕೆ ಉದುರಿ ಬಿದ್ದು, ತುಂಬಾ ನಷ್ಟ ಉಂಟಾಗಿದೆ’ ಎಂದೂ ಅವರು ಹೇಳಿದರು.

ಕೊಳೆರೋಗದಿಂದ ಉದುರಿದ್ದ ಅಡಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.