ಬೈಂದೂರು: ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಯ ಮುಂದಿನ ಶಿಕ್ಷಣ ಸಾಧನೆಗೆ ಉತ್ತೇಜನ ನೀಡುತ್ತದೆ. ವಿದ್ಯಾರ್ಥಿವೇತನ ಪಡೆದುಕೊಳ್ಳುವಾಗ ಆಗುವ ಖುಷಿಯೇ ವಿಶಿಷ್ಟ. ವಿದ್ಯಾರ್ಥಿಗಳು ಸಾಧನೆಯ ಪಥಕ್ಕೇರಿದ ಬಳಿಕ ಪ್ರೋತ್ಸಾಹಿಸಿದ ಸಂಸ್ಥೆಗಳನ್ನು ಮರೆಯಬಾರದು. ಸಮಾಜಕ್ಕೆ ಸ್ಪಂದಿಸುವ ಗುಣ ಮೈಗೂಡಿಸಿಕೊಳ್ಳಬೇಕು ಎಂದು ಕುಂದಾಪುರ ವೆಂಕಟರಮಣ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸಂದೀಪ್ ಗಾಣಿಗ ಹೇಳಿದರು.
ಗಾಣಿಗ ಪ್ರತಿಷ್ಠಾನ ಬೈಂದೂರು ವತಿಯಿಂದ ಬೈಂದೂರು ವತ್ತಿನಕಟ್ಟೆಯ ಮಹಾಸತಿ ಅಮ್ಮನವರ ದೇವಸ್ಥಾನದ ವಠಾರದಲ್ಲಿ ನಡೆದ ಎಸ್ಎಸ್ಎಲ್ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಉಚಿತ ನೋಟ್ಪುಸ್ತಕ, ಕಲಿಕೋಪಕರಣ, ಕೊಡೆ ವಿತರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬೈಂದೂರು ಗಾಣಿಗ ಪ್ರತಿಷ್ಠಾನದ ಅಧ್ಯಕ್ಷ ಕೆ. ರಮೇಶ ಗಾಣಿಗ ಮಾತನಾಡಿ, ಶಿಕ್ಷಣದಲ್ಲಿ ಯಾರೂ ವಂಚಿತರಾಗಬಾರದು. ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ, ಸಮಾಜದಲ್ಲಿ ಸತ್ಪ್ರಜೆಗಳಾಗಿ ರೂಪಿಸಿ. ಅವರಿಗೆ ಸಮಾಜಮುಖಿ ಚಿಂತನೆ, ಸಮಯಪ್ರಜ್ಞೆ, ಶಿಸ್ತು, ಶ್ರದ್ಧೆ ಕಲಿಸಿ ಸಮಾಜದ ಆಧಾರಸ್ತಂಭಗಳಾಗಿ ಮಾಡಿ ಎಂದು ಸಲಹೆ ನೀಡಿದರು.
ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯರಾದ ಬಿ.ಎಂ. ನಾಗರಾಜ ಗಾಣಿಗ ಬಂಕೇಶ್ವರ ವಿದ್ಯಾರ್ಥಿವೇತನ ವಿತರಿಸಿದರು. ಕುಂದಾಪುರ ತಾಲ್ಲೂಕು ಗಾಣಿಗ ಸಂಘದ ಅಧ್ಯಕ್ಷ ಸತೀಶ ಗಾಣಿಗ ಕಲಿಕಾ ಸಾಮಾಗ್ರಿ ವಿತರಿಸಿದರು. ಚಿಕ್ಕಯ್ಯ ಗಾಣಿಗ ಬಂಕೇಶ್ವರ ಉಚಿತ ಕೊಡೆ ವಿತರಿಸಿದರು.
ನಿವೃತ್ತ ಮುಖ್ಯಶಿಕ್ಷಕ ಆನಂದ ಗಾಣಿಗ, ಉಪ್ಪುಂದ ಗ್ರಾ.ಪಂ. ಉಪಾಧ್ಯಕ್ಷೆ ಮಹಾಲಕ್ಷ್ಮೀ, ರಂಗಕರ್ಮಿ ಗಣೇಶ ಟೈಲರ್, ಪ್ರಾಂಶುಪಾಲ ಸಂದೀಪ ಗಾಣಿಗ ಹರೇಗೋಡು ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದ ಸುಶ್ಮಿತಾ ಎಸ್. ಗಾಣಿಗ ಗಂಗೊಳ್ಳಿ, ಪಿಯುಸಿಯಲ್ಲಿ 8ನೇ ರ್ಯಾಂಕ್ ಪಡೆದ ಸಂಜನಾ ಗಾಣಿಗ ತಗ್ಗರ್ಸೆ ಅವರನ್ನು ಗೌರವಿಸಲಾಯಿತು.
ಯು.ಬಿ.ಶೆಟ್ಟಿ ಇಂಗ್ಲಿಷ್ ಮಾಧ್ಯಮ ಶಾಲೆ ಸಂಯೋಜಕಿ ಪ್ರೇಮಾ ಗಾಣಿಗ, ಪ್ರಗತಿಪರ ಕೃಷಿಕ ರಾಜು ಗಾಣಿಗ ಹುಳುವಾಡಿ, ಬೈಂದೂರು ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಶಾಖಾ ವ್ಯವಸ್ಥಾಪಕ ಸುದರ್ಶನ ಗಾಣಿಗ, ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ನಾಗಪ್ಪ ಗಾಣಿಗ ಶಿರೂರು ಭಾಗವಹಿಸಿದ್ದರು. ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿ ಶಿವಾನಂದ ಗಾಣಿಗ ಸ್ವಾಗತಿಸಿದರು. ನಾಗೇಂದ್ರ ಗಾಣಿಗ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.