ಉಡುಪಿ: ಬಡತನದ ಬೇಗೆಯಲ್ಲಿ ಅರಳಿರುವ ಪ್ರತಿಭಾವಂತ ವಿದ್ಯಾರ್ಥಿನಿ ಉಡುಪಿಯ ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜಿನ ಗಾಯತ್ರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100 ಅಂಕ ಪಡೆದಿದ್ದಾರೆ.
ಉಡುಪಿಯ ಕುಂಜಿಬೆಟ್ಟು ವಾರ್ಡ್ನ ಗಾಯತ್ರಿ ಅವರ ತಂದೆ ಪ್ರಕಾಶ್ ದೇವಾಡಿಗ ಕಟ್ಟಡ ಕಟ್ಟುವ ಮೇಸ್ತ್ರಿ ಕೆಲಸ ಮಾಡುತ್ತಿದ್ದಾರೆ. ತಾಯಿ ವಸಂತಿ ಬೀಡಿ ಕಟ್ಟಿ ಕುಟುಂಬಕ್ಕೆ ಆಧಾರವಾಗಿ ನಿಂತಿದ್ದಾರೆ. ಸಹೋದರ ಉದ್ಯೋಗದಲ್ಲಿದ್ದಾರೆ. ಆರ್ಥಿಕ ಸಮಸ್ಯೆಗಳ ನಡುವೆಯೂ ಗಾಯತ್ರಿ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ.
‘ಸರ್ಕಾರಿ ಶಾಲೆಗಳ ಬಗ್ಗೆ ಜನರಲ್ಲಿ ತಾತ್ಸಾರ ಭಾವನೆ ಇರುತ್ತದೆ. ಆದರೆ, ನಮ್ಮ ಕಾಲೇಜಿನಲ್ಲಿ ಅತ್ಯುತ್ತಮ ಕಲಿಕಾ ವಾತಾವರಣ ಇದೆ. ಖಾಸಗಿ ಶಾಲೆಗಳಿಗಿಂತ ಉತ್ತಮವಾದ ಸೌಲಭ್ಯಗಳು ಹಾಗೂ ಶಿಕ್ಷಕರಿದ್ದಾರೆ. ವಿಶೇಷ ಕ್ಲಾಸ್, ಮಹಾಮಾಯ ಫೌಂಡೇಷನ್ ತರಬೇತಿಯ ಫಲವಾಗಿ ಶೇ 100 ಅಂಕ ಪಡೆಯಲು ಸಾಧ್ಯವಾಯಿತು’ ಎಂದು ಗಾಯತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.
ಕಾಲೇಜಿನ ಪಾಠ ಹೊರತಾಗಿ ಟ್ಯೂಷನ್ಗೆ ಹೋಗಿಲ್ಲ. ಅಂದಿನ ಪಾಠಗಳ ಪುನರ್ ಮನನ ಹಾಗೂ ಕಠಿಣ ಅಭ್ಯಾಸದ ಫಲವಾಗಿ ನಿರೀಕ್ಷೆಯಂತೆ ಫಲಿತಾಂಶ ಬಂದಿದೆ. ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು ಕಾರ್ಡಿಯಾಲಜಿಸ್ಟ್ ಆಗುವ ಕನಸು ಇದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.