ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿರುವ ಪ್ರತಿಭಾವಂತ ಮಕ್ಕಳ ಸಂಗೀತ ಪ್ರತಿಭೆ ಅನಾವರಣಕ್ಕೆ ‘ಹಾಡು ನೀ ಹಾಡು’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಮುಖ್ಯಸ್ಥೆ ಸರಿತಾ ಸಂತೋಷ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 5 ರಿಂದ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದ್ದು, ಆಡಿಷನ್ನಲ್ಲಿ ಆಯ್ಕೆಯಾದವರಿಗೆ ಪ್ರಸಿದ್ಧ ಸಂಗೀತ ವಿದ್ವಾಂಸರಿಂದ ಮಾರ್ಗದರ್ಶನ ನೀಡಲಾಗುವುದು.
6 ತಿಂಗಳು ನಡೆಯುವ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಮಣಿಪಾಲದ ಲಯನ್ಸ್ ಕ್ಲಬ್ ಚಾರಿಟೆಬಲ್ ಫೌಂಡೇಷನ್ ನೀಡುತ್ತಿದೆ. ವಿ 4 ಸುದ್ದಿವಾಹಿನಿ ಶನಿವಾರ ಹಾಗೂ ಭಾನುವಾರ ಕಾರ್ಯಕ್ರಮ ಪ್ರಸಾರ ಮಾಡಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಮಕ್ಕಳು ಉಚಿತವಾಗಿ ನೋಂದಣಿ ಮಾಡಿಸಿಕೊಳ್ಳಬಹುದು.
ಸೆ.11ರಂದು ಉಡುಪಿಯ ಎಂಜಿಎಂ ಕಾಲೇಜಿನಲ್ಲಿ, ಕುಂದಾಪುರದ ಆರ್ಎನ್ ಶೆಟ್ಟಿ ಕಾಲೇಜಿನಲ್ಲಿಬೆಳಿಗ್ಗೆ 8ಕ್ಕೆ, ಸೆ.18ರಂದು ಮಂಗಳೂರಿನ ಕೋಡಿಯಾಲ್ಬೈಲ್ ಶಾರದಾ ವಿದ್ಯಾಲಯದಲ್ಲಿ, ಮೂಡಬಿದ್ರೆಯ ಆಳ್ವಾಸ್ ಕ್ಯಾಂಪಸ್, ಪುತ್ತೂರಿನಲ್ಲಿ ಸೇಂಟ್ ವಿಕ್ಟರ್ಸ್ ಬಾಲಕಿಯರ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 8ಕ್ಕೆ ಆಡಿಷನ್ ನಡೆಯಲಿದೆ.
ಭಾವಗೀತೆ, ಜಾನಪದ ಗೀತೆ, ಸಿನಿಮಾ ಹಾಡು ಹಾಗೂ ಇತರ ಕನ್ನಡ ಹಾಡುಗಳನ್ನು ಹಾಡಬಹುದು. ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನದ ಜತೆಗೆ ಆಕರ್ಷಕ ಉಡುಗೊರೆ ಹಾಗೂ ಹೆಸರಾಂತ ಗಾಯಕರು, ನಟ ನಟಿಯರನ್ನು ಭೇಟಿ ಆಡುವ ಅವಕಾಶ ಸಿಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸುರೇಶ್ ಪ್ರಭು, ಕೃಪಾ ಪ್ರಸಿದ್ಧ್, ಜಯಂತ್, ಗೌತಮ್, ಸುಹಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.