ADVERTISEMENT

ವಸತಿ ರಹಿತರಿಗೆ ಶೀಘ್ರವೇ ನಿವೇಶನ, ಮನೆ

ಮೊವಾಡಿ: ನಿವೇಶನ ಹಕ್ಕುಪತ್ರ ವಿತರಿಸಿದ ಶಾಸಕ ಸುಕುಮಾರ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 4:07 IST
Last Updated 10 ಜುಲೈ 2021, 4:07 IST
ತ್ರಾಸಿ ಗ್ರಾಮ ಪಂಚಾಯಿತಿ ಮೊವಾಡಿ ಗ್ರಾಮದ 22 ಕುಟುಂಬಕ್ಕೆ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಶುಕ್ರವಾರ ನಿವೇಶನ ಹಕ್ಕುಪತ್ರ ವಿತರಿಸಿದರು
ತ್ರಾಸಿ ಗ್ರಾಮ ಪಂಚಾಯಿತಿ ಮೊವಾಡಿ ಗ್ರಾಮದ 22 ಕುಟುಂಬಕ್ಕೆ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಶುಕ್ರವಾರ ನಿವೇಶನ ಹಕ್ಕುಪತ್ರ ವಿತರಿಸಿದರು   

ಬೈಂದೂರು: ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಗಳ ವಸತಿ ರಹಿತ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದ ಕುಟುಂಬಕ್ಕೆ ಶೀಘ್ರವೇ ನಿವೇಶನ ಮತ್ತು ಮನೆ ವಿತರಣೆ ಮಾಡಲಾಗುವುದು ಎಂದು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.

ತ್ರಾಸಿ ಗ್ರಾಮ ಪಂಚಾಯಿತಿ ಮೊವಾಡಿ ಗ್ರಾಮದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ 22 ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ವಸತಿ ರಹಿತರಿಗೆ ಅಗತ್ಯ ಸ್ಥಳ ಗುರುತಿಸಿ, ನಿವೇಶನ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ಮತ್ತು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶೀಘ್ರವೇ ಅಂಪಾರು, ಕಟ್‌ಬೆಲ್ತೂರು ಗ್ರಾಮಗಳಲ್ಲಿ ನಿವೇಶನ ವಿತರಿಸಲಾಗುವುದು ಎಂದರು.

ADVERTISEMENT

ಸರ್ಕಾರಿ ಸ್ಥಳದಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿರುವವರಿಗೆ ಅದೇ ನಿವೇಶನ ಮಂಜೂರು ಮಾಡಲಾಗುವುದು. ಕ್ಷೇತ್ರಕ್ಕೆ ರಾಜೀವ್‌ ಗಾಂಧಿ ವಸತಿ ನಿಗಮದಿಂದ ಒಮ್ಮೆ ಮಂಜೂರಾದ 40 ಮನೆಗಳ ಹಂಚಿಕೆ ರದ್ದುಪಡಿಸಲಾಗಿದೆ. ಅವುಗಳನ್ನು ಶೀಘ್ರ ಮರಳಿ ಪಡೆಯಲಾಗುವುದು. ನಿವೇಶನಗಳ ಹಕ್ಕುಪತ್ರ ಹೊಂದದೆ ಮನೆ ನಿರ್ಮಿಸಿಕೊಂಡವರಿಗೆ ಗ್ರಾಮ ಪಂಚಾಯಿತಿ ವಾಸ್ತವ್ಯದ ದೃಢೀಕರಣ ನೀಡುವ ಮೂಲಕ ನಿವಾಸಿಗಳು ವಿದ್ಯುತ್ ಸಂಪರ್ಕ ಪಡೆಯಲು ಅವಕಾಶ ಮಾಡಿ ಕೊಡಬೇಕು ಎಂದು
ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಹೇಮಾ ಸ್ವಾಗತಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾ ಎಸ್ ಅವರು ಪ್ರಾಸ್ತಾವಿಕ ಮಾತನಾಡಿ, ಮೊವಾಡಿಯಲ್ಲಿ ನಿವೇಶನ ವಿತರಿಸಲು 6 ಎಕರೆ ಸ್ಥಳ ಮೀಸಲಿಡಲಾಗಿದೆ. ಅದರಲ್ಲಿ 117 ನಿವೇಶನ ನಿರ್ಮಾಣ ಮಾಡಲಾಗಿದೆ. 112 ನಿವೇಶನಗಳನ್ನು ಅರ್ಹರಿಗೆ ಹಂತ ಹಂತವಾಗಿ ಹಂಚಿಕೆ ಮಾಡಲಾಗುತ್ತದೆ. ಇದೇ ಮೊದಲ ಬಾರಿಗೆ 4 ಸೆಂಟ್ಸ್ ವಿಸ್ತಿರ್ಣದ ನಿವೇಶನ ಹಂಚಿಕೆ ಮಾಡಲಾಗಿದೆ. ಎಲ್ಲ ನಿವೇಶನಗಳಿಗೆ ವಿದ್ಯುತ್, ಕುಡಿಯುವ ನೀರು ಸಂಪರ್ಕ ಕಲ್ಪಿಸಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಮಿಥುನ್ ಡಿ. ಬಿಜೂರು ವಂದಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರು, ಮಾಜಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.