ADVERTISEMENT

ಪೇಜಾವರ ಶ್ರೀಗಳ ಆರೋಗ್ಯ ಚೇತರಿಕೆಗೆ ಹೋಮ, ಹವನ

ಆರೋಗ್ಯದಲ್ಲಿ ಅಲ್ಪ ಚೇತರಿಕೆ: ಕರೆಮಾಡಿದ ಯೋಗಿ ಆದಿತ್ಯನಾಥ್, ನಿರ್ಮಲಾ ಸೀತಾರಾಮನ್‌

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 14:09 IST
Last Updated 21 ಡಿಸೆಂಬರ್ 2019, 14:09 IST
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಶನಿವಾರ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಯೋಗಕ್ಷೇಮ ವಿಚಾರಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಶನಿವಾರ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಯೋಗಕ್ಷೇಮ ವಿಚಾರಿಸಿದರು.   

ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥರ ಆರೋಗ್ಯ ಸುಧಾರಣೆಗೆ ಶನಿವಾರವೂ ನಾಡಿನ ಹಲವೆಡೆ ಪೂಜೆ, ಪ್ರಾರ್ಥನೆಗಳು ನಡೆದವು.

ಶ್ರೀಗಳು ಗುಣಮುಖರಾಗುವಂತೆಕೃಷ್ಣಮಠ , ಅನಂತೇಶ್ವರ, ಚಂದ್ರಮೌಳೀಶ್ವರ ದೇವಸ್ಥಾನ, ಪೆರ್ಣಂಕಿಲದ ಮಹಾ ಗಣಪತಿ ದೇವಸ್ಥಾನ, ಮುಚ್ಲುಕೋಡು ಸುಬ್ರಹ್ಮಣ್ಯ, ಕರಂಬಳ್ಳಿ ವೆಂಕಟರಮಣ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪ್ರಾರ್ಥನೆಗಳು ನಡೆದವು.

ಶ್ರೀಗಳ ಆರೋಗ್ಯ ಚೈತನ್ಯಕ್ಕಾಗಿ ಕಂಚಿ ಕಾಮಕೋಟಿ ಶಂಕರಾಚಾರ್ಯ ಪೀಠದ ವಿಜಯೇಂದ್ರ ಶ್ರೀಗಳ ಸೂಚನೆಯಂತೆ ಕಂಚಿ ಮಠದ ಎಲ್ಲ ಶಾಖೆಗಳಲ್ಲಿ ವಿಶೇಷ ವೇದ ಪಾರಾಯಣ ಸಹಿತ ಪ್ರಾರ್ಥನೆ ನಡೆಯಿತು. ಶಿರಸಿಯ ಸ್ವರ್ಣವಲ್ಲಿ ಮಠದಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ವಿಶೇಷ ಪೂಜೆ ಹವನ ನಡೆಸಿದರು.

ADVERTISEMENT

ಮೂಡುಬಿದಿರೆಯ ಜೈನಮಠದಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ ನೆರವೇರಿತು. ಕೂಷ್ಮಾಂಡಿನಿ ದೇವಿಗೆ ಶ್ರೀಗಳು ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು.

ಮಟ್ಟು ದೇವಳದಲ್ಲಿ ವಿದ್ವಾನ್ ಪ್ರವೀಣ ತಂತ್ರಿಗಳ ನೇತೃತ್ವದಲ್ಲಿ ಪುರೋಹಿತರು ದನ್ಚಂತರಿ ಹೋಮ ಮಾಡಿದರು. ದೇವಳದ ಅದ್ಯಕ್ಷ ಲಕ್ಷೀನಾರಾಯಣ ರಾವ್, ಅರ್ಚಕ ಶ್ರೀಕಾಂತ ಅಚಾರ್ಯ, ಕೃಷ್ಣರಾವ್‌, ಪ್ರವೀಣ ಸೇರಿಗಾರ್ ಉಪಸ್ಥಿತರಿದ್ದರು.

ವಿಶ್ವ ಹಿಂದೂ ಪರಿಷತ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ಶ್ರೀಗಳ ಚೇತರಿಕೆಗೆ ಸಮಸ್ತ ಹಿಂದೂಗಳು ಪ್ರಾರ್ಥಿಸುವಂತೆ ಕರೆ ನೀಡಿದರು. ಬೆಳಿಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ದೂರವಾಣಿ ಮೂಲಕ ಶ್ರೀಗಳ ಆರೋಗ್ಯ ವಿಚಾರಿಸಿದರು. ತುರ್ತು ನೆರವಿನ ಅಗತ್ಯಗಳು ಇದ್ದರೆ ತಿಳಿಸುವಂತೆ ಸೂಚಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಆಸ್ಪತ್ರೆಗೆ ಭೇಟಿನೀಡಿದ ಬಳಿಕ ಮಾತನಾಡಿ, ‘ಪೇಜಾವರ ಶ್ರೀಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.ವಯೋಸಹಜದ ಕಾರಣ ಆರೋಗ್ಯ ಸುಧಾರಣೆ ತಡವಾಗುತ್ತಿದೆ. ಶ್ರೀಗಳಿಗೆ ಬೇರೆ ಯಾವುದೇ ಕಾಯಿಲೆಗಳಿಲ್ಲವಾದ್ದರಿಂದ ಗುಣಮುಖರಾಗುವ ವಿಶ್ವಾಸವಿದೆ. ಅವರ ಆರೋಗ್ಯಕ್ಕೆ ಭಕ್ತರ ಪ್ರಾರ್ಥನೆ ಮುಖ್ಯ ಎಂದರು.

ಶ್ರೀಗಳ ಅನಾರೋಗ್ಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹರಡಬೇಡಿ. ಅವಸರದಲ್ಲಿ ಮತ್ತೊಬ್ಬರಿಗೆ ನೋವುಂಟು ಮಾಡುವ ಸಂದೇಶಗಳನ್ನು ಹರಿಬಿಡಬೇಡಿ. ಸಂಯಮದಿಂದ ವರ್ತಿಸಬೇಕು ಎಂದು ಮನವಿ ಮಾಡಿದರು.

ಪೇಜಾವರ ಶ್ರೀಗಳ ಶಿಷ್ಯೆ ಉಮಾಭಾರತಿ ಅವರು ಭದ್ರತೆಗೆ ಕಾರಣಕ್ಕೆ ಉಡುಪಿಗೆ ಬರಲಾಗಲಿಲ್ಲ. ಮಂಗಳೂರಿನಲ್ಲಿ ಕರ್ಫ್ಯೂ ಹಿಂತೆಗೆದುಕೊಂಡ ಬಳಿಕ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಭೇಟಿ ನೀಡಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು ದೂರವಾಣಿ ಮೂಲಕ ಸ್ವಾಮೀಜಿಯ ಯೋಗಕ್ಷೇಮ ವಿಚಾರಿಸಿದ್ದಾರೆ. ಮಠದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಇಂದು ಸಾಮೂಹಿಕ ಪ್ರಾರ್ಥನೆ:

ಶ್ರೀಗಳ ಆಯುಷ್ಯ ವೃದ್ಧಿಗೆ ಭಾನುವಾರ ಸಂಜೆ 6ಕ್ಕೆ ಬೆಂಗಳೂರಿನ ಪುತ್ತಿಗೆ ಮಠದಲ್ಲಿ ವಿಷ್ಣುಸಹಸ್ರನಾಮ, ನೃಸಿಂಹಾಷ್ಟೋತ್ತರ, ಸುಂದರಕಾಂಡ ಪಾರಾಯಣ ನಡೆಯಲಿದೆ ಎಂದು ತೌಳವ ಮಾಧ್ವ ಒಕ್ಕೂಟ ತಿಳಿಸಿದೆ.

ನಿರಂತರ ಭೇಟಿ

ಕೆಎಂಸಿ ಆಸ್ಪತ್ರೆಗೆ ಭೇಟಿನೀಡುವವರ ಸಂಖ್ಯೆ ಶನಿವಾರವೂ ಹೆಚ್ಚಾಗಿತ್ತು. ಗಣ್ಯರು, ರಾಜಕೀಯ ನಾಯಕರು, ಸ್ವಾಮೀಜಿಗಳು ನಿರಂತರವಾಗಿ ಭೇಟಿನಿಡುತ್ತಲೇ ಇದ್ದಾರೆ.ಮಾಣಿಲದ ಮೋಹನದಾಸ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ಮುಖಂಡ ಕೇಶವ ಹೆಗಡೆ, ಸಚಿವ ಈಶ್ವರಪ್ಪ, ಜೈನ‌ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಬಾಳೆಗಾರು ರಘುಭೂಷಣ ತೀರ್ಥರು, ಉತ್ತರಾಧಿ ಮಠದ ಸತ್ಯಾತ್ಮತೀರ್ಥರು, ಭಂಡಾರಕೇರಿ ಮಠದ ವಿದ್ಯೇಶತೀರ್ಥರು, ಐವನ್ ಡಿಸೋಜ, ಯು.ಟಿ.ಖಾದರ್, ಸಿ.ಎಂ.ಇಬ್ರಾಹಿಂ, ಭೀಮನಕಟ್ಟೆ ಮಠದ ರಘುವರೇಂದ್ರ ತೀರ್ಥರು, ಶಾಸಕ ರಘುಪತಿ ಭಟ್, ಸುನಿಲ್ ಕುಮಾರ್, ಲಾಲಾಜಿ‌ ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಡಾ.ಮೋಹನ ಆಳ್ವ, ನೀರಾ ರಾಡಿಯಾ, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಸಂತೋಷ್ ಗುರೂಜಿ ಭೇಟಿನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.

ಕರೆಮಾಡಿದ ಯೋಗಿ ಆದಿತ್ಯನಾಥ್‌

ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೂರವಾಣಿ ಕರೆ ಮಾಡಿದ್ದರು. ಶ್ರೀಗಳ ಚಿಕಿತ್ಸೆಯ ಕುರಿತು ಮಾಹಿತಿ ಪಡೆದುಕೊಂಡರು ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.