ADVERTISEMENT

ಆತಂಕಗಳೆಲ್ಲ ಕಾಂಗ್ರೆಸ್‌ನವರಿಗೆ ಮಾತ್ರ: ಬಸವರಾಜ್ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 13:35 IST
Last Updated 28 ಜೂನ್ 2021, 13:35 IST

ಕಾರ್ಕಳ: ‘ರಾಜ್ಯದ ಮುಖ್ಯಮಂತ್ರಿಗೆ ಯಡಿಯೂರಪ್ಪನವರಿಗೆ ಭದ್ರತೆ ಹೆಚ್ಚಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವ ಕುಮಾರ್ ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಯಾವಾಗಲೂ ಜನರ ಜೊತೆ ಇರುವವರು. ಜನರ ಮಧ್ಯೆ ಹೋಗಲು ಅವರಿಗೆ ಯಾವುದೇ ತೊಂದರೆಯಿಲ್ಲ. ಜನರ ಮಧ್ಯೆ ಇದ್ದು ಈಗಲೂ ಎಲ್ಲ ಜಿಲ್ಲೆಗಳಿಗೂ ಹೋಗುತ್ತಿರುತ್ತಾರೆ. ಇಂತಹ ಆತಂಕಗಳೆಲ್ಲ ಕಾಂಗ್ರೆಸ್‌ನವರಿಗೆ ಮಾತ್ರ’ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ರಮೇಶ ಜಾರಕಿಹೊಳಿ ಮತ್ತೆ ಮುಂಬೈಗೆ ತೆರಳುವ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಏನೂ ಹೇಳುವುದಿಲ್ಲ. ರೇಖಾ ಕದಿರೇಶ್ ಹತ್ಯೆ ಪ್ರಕರಣ ಹಲವು ಆಯಾಮಗಳನ್ನು ತೆರೆದುಕೊಳ್ಳುತ್ತಿದೆ. ಪೊಲೀಸರು ಕೂಲಂಕಷ ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಸತ್ಯ ಗೊತ್ತಾಗಲಿದೆ’ ಎಂದರು.

ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ‘ಇನ್ನೂ ಸರ್ಕಾರ ಪೂರ್ಣಗೊಳ್ಳಲು ಎರಡು ವರ್ಷ ಅವಧಿ ಬಾಕಿಯಿದೆ. ಕಾಂಗ್ರೆಸ್‌ನಲ್ಲಿ ಇಷ್ಟು ಬೇಗ ಪೈಪೋಟಿ ಆಗುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು. ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ. ಪರಮೇಶ್ವರ ಅವರ ಅಭದ್ರತೆ ಕಾಡುತ್ತಿದೆ. ಇನ್ನು ಎರಡು ವರ್ಷ ನೂರಕ್ಕೆ ನೂರರಷ್ಟು ಮುಖ್ಯಮಂತ್ರಿ ಬದಲಾಗುವುದಿಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.