ಉಡುಪಿ: ವಿಜಯದಶಮಿಯ ದಿನವಾದ ಸೋಮವಾರ ಕೃಷ್ಣ ಮಠದಲ್ಲಿ ಸಂಪ್ರದಾಯದಂತೆ ಕದಿರು ಕಟ್ಟುವ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ಸೋದೆ ಮಠದಲ್ಲಿ ಕದಿರನ್ನು ಪೂಜಿಸಿ ಚಿನ್ನದ ಪಲ್ಲಕ್ಕಿಯಲ್ಲಿ ಕದಿರು (ಭತ್ತದ ತೆನೆ) ಇರಿಸಿ ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಕೃಷ್ಣನ ಗರ್ಭಗುಡಿಯ ಪೂರ್ವದ್ವಾರದ ಮೂಲಕ ಕದಿರನ್ನು ಒಳತಂದು ಪರ್ಯಾಯ ಅದಮಾರು ಈಶಪ್ರಿಯ ತೀರ್ಥರ ಉಪಸ್ಥಿತಿಯಲ್ಲಿ ಮಠದ ಪಾರುಪತ್ಯಗಾರರಾದ ಲಕ್ಷ್ಮೀಶ ಆಚಾರ್ಯರ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ಬಳಿಕ ಬಡಗುಮಾಳಿಗೆಯಲ್ಲಿ ಪೂಜಿಸಿ ಕದಿರು ಕಟ್ಟಲಾಯಿತು.
ನಂತರ ರಾಜಾಂಗಣದಲ್ಲಿ ಭಕ್ತರಿಗೆ ಕದಿರನ್ನು ಪ್ರಸಾದದ ರೂಪವಾಗಿ ಹಂಚಲಾಯಿತು. ಪ್ರತಿವರ್ಷ ಕದಿರು ಕಟ್ಟುವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿತ್ತು. ಈ ವರ್ಷ ಕೋವಿಡ್ ಸೋಂಕು ಹರಡುವಿಕೆ ತಡೆಯಲು ಸರಳವಾಗಿ ಸಂಪ್ರದಾಯ ಪಾಲಿಸಲಾಯಿತು. ಮಠದ ವಿದ್ವಾಂಸರು ಹಾಗೂ ಸಿಬ್ಬಂದಿ ಮಾತ್ರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.