ADVERTISEMENT

ಕಟಪಾಡಿ: 10ರಂದು ನುಡಿಜಾತ್ರೆ, ಸಿದ್ಧತೆ

ಕಾಪು ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ: ಕ್ಯಾಥರಿನ್ ರೊಡ್ರಿಗಸ್ ಅಧ್ಯಕ್ಷತೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 5:49 IST
Last Updated 7 ಡಿಸೆಂಬರ್ 2022, 5:49 IST
ಕ್ಯಾಥರಿನ್ ರೊಡ್ರಿಗಸ್
ಕ್ಯಾಥರಿನ್ ರೊಡ್ರಿಗಸ್   

ಶಿರ್ವ: ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲ್ಲೂಕು ಘಟಕದ ವತಿಯಿಂದ ಕಾಪು ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನವು ಕಟಪಾಡಿ ಎಸ್.ವಿ.ಎಸ್. ಪದವಿಪೂರ್ವ ಕಾಲೇಜಿನಲ್ಲಿ ಡಿ. 10ರಂದು ಸಾಹಿತಿ, ರಂಗಕರ್ಮಿ ಕ್ಯಾಥರಿನ್ ರೊಡ್ರಿಗಸ್ ಕಟಪಾಡಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸ್ವರಾಜ್ಯ ಸಂಗ್ರಾಮದಲ್ಲಿ ಕಟಪಾಡಿ ಕೇಂದ್ರಿತ ಸಮರಸ್ಫೂರ್ತಿ’ ಎಂಬ ಪರಿಕಲ್ಪನೆಯಲ್ಲಿ ಸ್ವಾತಂತ್ರ್ಯ ಸೇನಾನಿ ಗಳಾದ ಕಟಪಾಡಿ ಪಾಂಗಾಳ ಲಕ್ಷ್ಮೀ ನಾರಾಯಣ ನಾಯಕ್ ಸಭಾಂಗಣ, ಕಟಪಾಡಿ ಪಾಂಗಾಳ ಮಂಜುನಾಥ ನಾಯಕ್ ವೇದಿಕೆಯಲ್ಲಿ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಉಡುಪಿ ಜಿಲ್ಲೆಯ ರಜತ ಮಹೋ ತ್ಸವದ ಪ್ರಯುಕ್ತ ವಿಚಾರ ಗೋಷ್ಠಿಗಳು, ಸಾಹಿತಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.

ಸಮ್ಮೇಳನದ ಆವರಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಕಟಪಾಡಿ ಗೋಪಾಲ ಕೋಟ್ಯಾನ್ ಹೆಸರು ಇಡಲಾಗಿದೆ. ಎಸ್.ವಿ.ಎಸ್ ವಿದ್ಯಾಸಂಸ್ಥೆಗೆ 75ರ ಹರೆಯದ ಸವಿನೆನಪಿಗಾಗಿ ಮಹಾದ್ವಾರಕ್ಕೆ ಸಂಸ್ಥಾಪಕ ಪಾಂಗಾಳ ಶ್ರೀನಿವಾಸ ನಾಯಕ್ ಮತ್ತು ವೈಕುಂಠ ನಾಯಕ್ ಅವರ ಹೆಸರಿಡಲಾಗಿದೆ.

ADVERTISEMENT

ಸಮ್ಮೇಳನದ ಶೋಭಾಯಾತ್ರೆಗೆ ಎಸ್.ವಿ.ಎಸ್. ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸತ್ಯೇಂದ್ರ ಪೈ ಚಾಲನೆ ನೀಡುವರು. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಸಮ್ಮೇಳನ ಉದ್ಘಾಟಿಸುವರು. ಗೋವಾ ವಿಮೋಚನಾ ಹೋರಾಟಗಾರ ಶಿರ್ವದ ಮಟ್ಟಾರು ವಿಟ್ಠಲ ಕಿಣಿ, 3ನೇ ಸಮ್ಮೇಳನದ ಅಧ್ಯಕ್ಷ ಭರತ್‍ಕುಮಾರ್ ಪೊಲಿಪು ಭಾಗವಹಿಸುವರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಲಿದ್ದು, ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾಪು ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಉಪಸ್ಥಿತರಿರಲಿದ್ದಾರೆ.

ಗೋಷ್ಠಿಯಲ್ಲಿ ‘ಸ್ವರಾಜ್ಯ ಸಂಗ್ರಾಮದಲ್ಲಿ ಕಟಪಾಡಿ ಕೇಂದ್ರಿತ ಸಮರ ಸ್ಫೂರ್ತಿ’ ಕುರಿತು ಉಪನ್ಯಾಸಕ ದಿನೇಶ್ ಕುಮಾರ್ ಕಟಪಾಡಿ ಮತ್ತು ‘ಉಡುಪಿಯ ಐತಿಹಾಸಿಕ, ಸಾಹಿತ್ಯಿಕ ಸಾಂಸ್ಕೃತಿಕ ಹಿನ್ನೆಲೆ’ ಬಗ್ಗೆ ಚಿಂತಕ ಡಾ.ರಾಘವೇಂದ್ರ ರಾವ್ ಕಟಪಾಡಿ ವಿಷಯ ಮಂಡನೆ ಮಾಡುವರು. ಕವಯತ್ರಿ ಫಾತಿಮಾ ರಲಿಯಾ ಹೆಜಮಾಡಿ ಉಪಸ್ಥಿತಿಯಲ್ಲಿ ‘ವಿದ್ಯಾರ್ಥಿ ಕವಿಗೋಷ್ಠಿ’ಯಲ್ಲಿ ತಾಲೂಕಿನ ವಿವಿಧ ಕಾಲೇಜುಗಳ 12 ಮಂದಿ ಕವನ ವಾಚನ ಮಾಡುವರು.

ಸಮಾರೋಪ ಸಮಾರಂಭದಲ್ಲಿ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಸ್ಟೀವನ್ ಕ್ವಾಡ್ರಸ್ ಸಮಾರೋಪ ಭಾಷಣ ಮಾಡುವರು. ಅದಾನಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ಸಾಧಕರನ್ನು ಸನ್ಮಾನಿಸುವರು.

ಶಂಕರ್ ದಾಸ್ ಚಂಡ್ಕಳ ಮತ್ತು ತಂಡದಿಂದ ಕರಗ ನೃತ್ಯ, ಗಣೇಶ ಗಂಗೊಳ್ಳಿ ಮತ್ತು ತಂಡದಿಂದ ಸುಗಮ ಸಂಗೀತ ಹಾಗೂ ಸ್ಥಳೀಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ಕಸಾಪ ಕಾಪು ತಾಲ್ಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ, ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ದಯಾನಂದ ಪೈ, ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸನ್ಮಾನ ಪಡೆಯಲಿರುವ ಸಾಧಕರು
ಸುಧಾಕರ ಪಾಣಾರ ಮೂಡುಬೆಳ್ಳೆ (ದೈವಾರಾಧನೆ), ಸುಮಂಗಳಾ ಕುಲಾಲ್ ಪಂಜಿಮಾರು (ಭಿನ್ನ ಸಾಮರ್ಥ್ಯದ ಪ್ರತಿಭೆ), ಸಂದೀಪ್ ರಾವ್ ಮಟ್ಟು (ಕೃಷಿ), ಡಾ.ಉದಯಕುಮಾರ್ ಶೆಟ್ಟಿ (ವೈದ್ಯಕೀಯ), ರೂಪಾ ಆಚಾರ್ಯ ಪಡುಬಿದ್ರಿ (ಕುಸುರಿ ಕಲೆ), ಪ್ರಕಾಶ್ ಸುವರ್ಣ ಕಟಪಾಡಿ (ಮಾಧ್ಯಮ), ವೆಂಕಟರಮಣ ಭಟ್ (ಅಪ್ಪು ಭಟ್) ಇನ್ನಂಜೆ (ಧಾರ್ಮಿಕ), ರಾಜೀವ ತೋನ್ಸೆ (ಯಕ್ಷಗಾನ), ಸುಭಾಸ್ ನಾಯಕ್ ಬಂಟಕಲ್ಲು (ಪುರಾತತ್ವ ಸಂಶೋಧನೆ), ಅನ್ವರ್ ಕಟಪಾಡಿ (ಕ್ರೀಡೆ), ಸಂಘ ಸಂಸ್ಥೆಗಳ ಪರವಾಗಿ ರವಿ ಫ್ರೆಂಡ್ಸ್ ಕಟಪಾಡಿ, ಗಿರಿಬಳಗ ಕುಂಜಾರುಗಿರಿ, ಮಹಿಳಾ ಮಂಡಲ(ರಿ) ಕಟಪಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.