ಪಡುಬಿದ್ರಿ: ‘ಕಾರ್ಗಿಲ್ ಯುದ್ಧ ಎಂದೂ ಮರೆಯಲಾಗದ ಅನುಭವ. ದುರ್ಗಮವಾದ ಪ್ರದೇಶದಲ್ಲಿ ಅತಿ ಕಷ್ಟದ ಕೆಲಸವನ್ನು ಸೈನಿಕರು ಸುಲಭದಲ್ಲಿ ನಿಭಾಯಿಸಿ, ನಮ್ಮ ದೇಶಕ್ಕೆ ವಿಜಯವನ್ನು ತಂದುಕೊಟ್ಟಿದ್ದಾರೆ. ಅವರಿಗೆ ಶತಕೋಟಿ ನಮನಗಳು’ ಎಂದು ಮಾಜಿ ಸೈನಿಕ ಬಾಲಕೃಷ್ಣ ಟಿ. ಭಂಡಾರಿ ಹೇಳಿದರು.
ಇಲ್ಲಿನ ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕದ ಆಶ್ರಯದಲ್ಲಿ ಸೋಮವಾರ ನಡೆದ ‘ಕಾರ್ಗಿಲ್ ವಿಜಯ ದಿವಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಂ. ರಾಮಕೃಷ್ಣ ಪೈ ಮಾತನಾಡಿ, ‘ಕಾರ್ಗಿಲ್ ಗಡಿ ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ಮಾಡುವ ಸಂದರ್ಭದಲ್ಲಿ ತನ್ನ ಬಲಗಾಲನ್ನೇ ಕಳೆದುಕೊಂಡರೂ ಕೃತಕ ಕಾಲಿನೊಂದಿಗೆ ಬಾಲಕೃಷ್ಣ ಟಿ. ಭಂಡಾರಿ ಸೇವೆ ಸಲ್ಲಿಸಿದ್ದಾರೆ. ಅವರು ನಮ್ಮ ಶಾಲೆ ವಿದ್ಯಾರ್ಥಿ ಆಗಿದ್ದಾಗಲೇ ಎನ್.ಸಿ.ಸಿಯಲ್ಲಿದ್ದು, ತುಂಬ ಆಸಕ್ತಿಯಿಂದ ಕ್ಯಾಂಪ್ನಲ್ಲಿ ಭಾಗವಹಿಸಿದ್ದರು. ಆ ಮೇಲೆ ಭೂಸೇನೆಗೆ ಸೇರಿ ಅಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಮ್ಮ ಹೆಮ್ಮೆಯ ಹಳೆ ವಿದ್ಯಾರ್ಥಿ’ ಎಂದು ಕೊಂಡಾಡಿದರು.
ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀಕಾಂತ್ ರಾವ್, ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಲಕ್ಷ್ಮಿ ನಾಯಕ್, ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನಿಶ್ಮಿತಾ ಶೆಟ್ಟಿ ಇದ್ದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ. ಜಯಶಂಕರ ಕಂಗಣ್ಣಾರು ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ದೇವಿಪ್ರಸಾದ್ ವಂದಿಸಿದರು. ವಾಣಿಜ್ಯ ಉಪನ್ಯಾಸಕ ವಿಶಾಖ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.