ಕಾರ್ಕಳ: ಸಾಹಿತ್ಯ ಬದುಕು ಕಲಿ ಸುತ್ತದೆ, ಸಾಹಿತ್ಯ ಚಟುವಟಿಕೆಗಳು ವ್ಯಕ್ತಿತ್ವವನ್ನು ಬೆಳೆಸುತ್ತವೆ ಎಂದು ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಅರುಣ್ ಕುಮಾರ್ ಎಸ್.ಆರ್ ಅಭಿಪ್ರಾಯಪಟ್ಟರು.
ಇಲ್ಲಿನ ಮಂಜುನಾಥ ಪೈ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಾಹಿತ್ಯ ವೇದಿಕೆ ಹಾಗೂ ಲಲಿತಕಲಾ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ ಸಾಹಿತ್ಯ ಸಿಂಚನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಸಾಹಿತ್ಯವು ವ್ಯಕ್ತಿಯನ್ನು ಸಮಾಜಮುಖಿಯನ್ನಾಗಿಸುತ್ತದೆ. ಮನುಷ್ಯನಾಗುವ ಕಡೆಗೆ ಕರೆದುಕೊಂಡು ಹೋಗುತ್ತದೆ ಎಂದು ಅವರು ಅಭಿಮತ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಕಿರಣ್ ಎಂ ಮಾತನಾಡಿ ಮನುಷ್ಯ ಒಂದೇ ಸಮಯದಲ್ಲಿ ಹಲವಾರು ಕಾರ್ಯ ಗಳನ್ನು ಒಟ್ಟಿಗೆ ಮಾಡುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಓದಿನ ಜೊತೆಗೆ ಸಾಹಿತ್ಯ ಹಾಗೂ ಕಲೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಪ್ರಪಂಚದ ಇತಿಹಾಸ ಗಮನಿಸಿದರೆ ರಾಜ್ಯಗಳ ವಿಭಜನೆ ಆದದ್ದು ಭಾಷೆಗಳ ಆಧಾರದಲ್ಲಿ. ಅಂದರೆ ಭಾಷೆ-ಸಾಹಿತ್ಯ ಮನುಷ್ಯರ ಮಧ್ಯೆ ಎಷ್ಟು ಹಾಸುಹೊಕ್ಕಾಗಿದೆ ಎಂದರೆ ಹೊಸ ಹುಟ್ಟು, ಮರು ಹುಟ್ಟು ಹಾಗೂ ಕ್ರಾಂತಿಗಳಿಗೆ ಭಾಷೆಯೇ ಮೂಲ ಎಂದರು.
ವಿದ್ಯಾರ್ಥಿನಿ ಕೃತಿಕಾ, ಸೌಮ್ಯದಾತೆ, ಪ್ರಜ್ಞಾ ಹಾಗೂ ಧನ್ಯ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಐಶ್ವರ್ಯ ಸ್ವಾಗತಿಸಿದರು. ಸಾಹಿತ್ಯ ವೇದಿಕೆಯ ಸಂಚಾಲಕ ಯೋಗೇಶ್ ಡಿ.ಹೆಚ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ವಿನಯ ನಾಥು ನಿರೂಪಿಸಿದರು. ಲಲಿತಕಲಾ ಸಂಘದ ಸಂಚಾಲಕ ಗಣೇಶ್, ಎಸ್, ಐಕ್ಯೂಎಸಿ ಸಂಚಾಲಕಿ ಸುಷ್ಮಾರಾವ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.