ADVERTISEMENT

ಕಟಪಾಡಿ ಜಂಕ್ಷನ್‌: ಟ್ರಾಫಿಕ್ ಜಾಮ್ ಕಿರಿಕಿರಿ

₹17 ಕೋಟಿ ವೆಚ್ಚದಲ್ಲಿ ಅಂಡರ್‌ಪಾಸ್ ನಿರ್ಮಾಣ ಟೆಂಡರ್‌: ಇನ್ನೂ ದೊರೆತಿಲ್ಲ ಕಾಮಗಾರಿಗೆ ಚಾಲನೆ

ಪ್ರಕಾಶ ಸುವರ್ಣ ಕಟಪಾಡಿ
Published 1 ಜುಲೈ 2025, 7:51 IST
Last Updated 1 ಜುಲೈ 2025, 7:51 IST
ಕಟಪಾಡಿ ಹೆದ್ದಾರಿ ಜಂಕ್ಷನ್‌
ಕಟಪಾಡಿ ಹೆದ್ದಾರಿ ಜಂಕ್ಷನ್‌   

ಶಿರ್ವ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಟಪಾಡಿ ಪೇಟೆ ಸಮೀಪ ಹೆದ್ದಾರಿ ಜಂಕ್ಷನ್ ಅತೀವ ಟ್ರಾಫಿಕ್ ಜಾಮ್ ಕಿರಿಕಿರಿಯಿಂದಾಗಿ ಅಪಾಯಕಾರಿಯಾಗಿ ಪರಿಣಮಿಸಿದೆ. ದಿನನಿತ್ಯ ಪೊಲೀಸರು ಇಲ್ಲಿ ಕಾವಲು ಕಾಯದಿದ್ದಲ್ಲಿ ಹೆದ್ದಾರಿ ದಾಟುವುದೇ ಜನರಿಗೆ ಕಷ್ಟವಾಗಿದೆ.

ಕಟಪಾಡಿ ಜಂಕ್ಷನ್ ಸಮೀಪ ವಾಹನ ದಟ್ಟಣೆ ದಿನೇ ದಿನೇ ಅಧಿಕವಾಗಿ ಹೆದ್ದಾರಿಯಲ್ಲೇ ಟ್ರಾಫಿಕ್ ಜಾಮ್ ಉಂಟಾಗುವುದರಿಂದ ವಾಹನ ಚಾಲಕರು,  ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಂತೂ ಹೆದ್ದಾರಿ ದಾಟುವುದು ಬಲು ಅಪಾಯಕಾರಿಯಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ.

ಉಡುಪಿಯ ಕಿನ್ನಿಮೂಲ್ಕಿ ಮಾದರಿಯಲ್ಲಿ ₹17 ಕೋಟಿ ವೆಚ್ಚದಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ಕಳೆದ ಮಾರ್ಚ್‌ನಲ್ಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಕಾಮಗಾರಿಗೆ ಚಾಲನೆ ದೊರೆತಿಲ್ಲ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಈಚೆಗೆ ಹೆದ್ದಾರಿ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದರು. ಸರ್ವೀಸ್ ರಸ್ತೆ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಶೀಘ್ರ ನಡೆಸುವಂತೆ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌ಗಳಿಗೆ ಸೂಚಿಸಿದ್ದರೂ ಪ್ರಗತಿಯಾಗಿಲ್ಲ.

ADVERTISEMENT

ಈ ಭಾಗದಲ್ಲಿ ಶಿರ್ವ, ಮಟ್ಟು, ಉಡುಪಿ, ಕಾಪು ಕಡೆಯಿಂದ ಬರುವ ವಾಹನಗಳು ಕಟಪಾಡಿ ಜಂಕ್ಷನ್‌ನಲ್ಲೇ ಜಮಾವಣೆಗೊಳ್ಳುವುದರಿಂದ ಅಂಡರ್‌ಪಾಸ್ ವ್ಯವಸ್ಥೆಯಿಲ್ಲದೆ ದಿನನಿತ್ಯ ವಾಹನಗಳ ನಿಯಂತ್ರಣ ಕಷ್ಟಸಾಧ್ಯವೆನಿಸಿದೆ. ಹೆದ್ದಾರಿ ಸಮೀಪ ಕಟಪಾಡಿ ಬಸ್ ನಿಲ್ದಾಣದಲ್ಲೀಗ ಅಡ್ಡಾದಿಡ್ಡಿಯಾಗಿ ವಾಹನಗಳು ನಿಲುಗಡೆಗೊಂಡು ಅಂಗಡಿ ಮುಂಗಟ್ಟುಗಳು ಅಲ್ಲದೆ ಆಟೊರಿಕ್ಷಾ ನಿಲುಗಡೆಗೂ ಸಮರ್ಪಕ ಸ್ಥಳ ಇಲ್ಲದಂತಾಗಿದೆ.

ಈ ಹಿಂದೆ ರಾ.ಹೆ. ಕಾಮಗಾರಿ ವೇಳೆ ಅಂಡರ್‌ಪಾಸ್ ಬದಲು ಜಂಕ್ಷನ್ ನಿರ್ಮಾಣ ಮಾಡಿರುವುದರಿಂದ ಕಟಪಾಡಿ ಪೇಟೆಯಲ್ಲಿ ಬಾಡಿಗೆ ಟೆಂಪೊ, ಕಾರು ನಿಲ್ದಾಣಗಳಿಗೆ ವ್ಯವಸ್ಥಿತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದಂತಾಗಿದೆ. ಕಟಪಾಡಿಯಲ್ಲಿ ರಾ.ಹೆ. ಚತುಷ್ಪಥ ಕಾಮಗಾರಿಯ ಅವಾಂತರದಿಂದಾಗಿ ಪ್ರತಿನಿತ್ಯ ಜಂಕ್ಷನ್‌ನಲ್ಲಿ ವಾಹನದಟ್ಟಣೆ ಹೆಚ್ಚುತ್ತಿದೆ.

ಹೆದ್ದಾರಿಯಲ್ಲಿ ವಾಹನ ಸಂಚಾರ ನಿರ್ವಹಣೆ ಮಾಡಲು ಪೊಲೀಸರು ಇಲ್ಲದಿದ್ದಲ್ಲಿ ಪ್ರತಿನಿತ್ಯ ಸಣ್ಣಪುಟ್ಟ ಅವಘಡ ನಡೆಯುತ್ತಲೇ ಇರುತ್ತದೆ. ರಾತ್ರಿ ಅನೇಕ ಬಾರಿ ವಾಹನಗಳು ಬ್ಯಾರಿಕೇಡ್‌ ಅಥವಾ ಡಿವೈಡರ್‌ಗಳಿಗೆ ಡಿಕ್ಕಿ ಹೊಡೆಯುವುದು ಸರ್ವೇ ಸಾಮಾನ್ಯವಾಗಿದೆ. ಪ್ರತಿನಿತ್ಯ ಕಟಪಾಡಿ ಪೊಲೀಸ್ ಉಪಠಾಣೆಯ ಪೊಲೀಸರು ಜನರನ್ನು ರಸ್ತೆ ದಾಟಿಸಲು ಸಹಕರಿಸಬೇಕು. ಜಂಕ್ಷನ್‌ನಲ್ಲಿ ಅಪಾಯಕಾರಿ ಸನ್ನಿವೇಶ ಹೆಚ್ಚುತ್ತಿದ್ದು, ವಾಹನ ಚಾಲಕರು, ಪಾದಾಚಾರಿಗಳು ಹೈರಾಣಾಗುತ್ತಿದ್ದಾರೆ. 4 ದಿಕ್ಕುಗಳಿಂದ ಸಾಗಿಬರುವ ವಾಹನಗಳನ್ನು ನಿಯಂತ್ರಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡುವುದು ಪೊಲೀಸರಿಗೆ ಬಲು ತ್ರಾಸದಾಯಕ ಕೆಲಸವಾಗಿ ಪರಿಣಮಿಸಿದೆ. ಅನೇಕ ಸಂದರ್ಭ ತುರ್ತು ಪರಿಸ್ಥಿತಿ ವಾಹನಗಳು ಜಂಕ್ಷನ್ ದಾಟಲು ಪ್ರಯಾಸಪಡಬೇಕಿದೆ.

ಹೆದ್ದಾರಿ ಬದಿಯಲ್ಲೇ ವಾಣಿಜ್ಯ ಸಂಕೀರ್ಣ, ಅಂಗಡಿಗಳು ನಿರ್ಮಾಣಗೊಂಡಿದ್ದು, ಸ್ಥಳಾವಕಾಶವಿಲ್ಲದೆ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ಚತುಷ್ಪಥ ಹೆದ್ದಾರಿ ಕಾಮಗಾರಿ ವೇಳೆ ಕಟಪಾಡಿ ಪೇಟೆ ಸಮೀಪ ಹೆದ್ದಾರಿ ದಾಟಿ ಹೋಗಲು ಸಮರ್ಪಕ ವ್ಯವಸ್ಥೆ ಕಲ್ಪಿಸದೆ ಅವೈಜ್ಞಾನಿಕವಾಗಿ ಜಂಕ್ಷನ್ ನಿರ್ಮಿಸಿರುವುದರಿಂದ ಸಮಸ್ಯೆ ಉದ್ಭವಿಸಿದೆ. ಅಂಡರ್‌ಪಾಸ್ ನಿರ್ಮಾಣ ಕಾಮಗಾರಿಗೆ ಕೂಡಲೇ ಚಾಲನೆ ನೀಡಬೇಕು ಎಂದು ಕಟಪಾಡಿ ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಚಂದ್ರ ಪೂಜಾರಿ ಸರ್ಕಾರಿಗುಡ್ಡೆ ಒತ್ತಾಯಿಸಿದ್ದಾರೆ.


‘ವೈಜ್ಞಾನಿಕವಾಗಿ ಕಾಮಗಾರಿ ನಡೆಯಲಿ’

ಕಟಪಾಡಿ ಜಂಕ್ಷನ್‌ನಲ್ಲಿ ವಾಹನ ದಟ್ಟಣೆಯಿಂದ ಪ್ರತಿದಿನ ಅವಾಂತರ ಸೃಷ್ಟಿಯಾಗುತ್ತಿದೆ. ಪಾದಾಚಾರಿಗಳು, ವಾಹನ ಚಾಲಕರಿಗೆ ತೊಂದರೆಯಾಗುತ್ತಿದೆ. ಹೆದ್ದಾರಿ ಪಕ್ಕದಲ್ಲೇ ಇರುವ ಸರ್ವಿಸ್ ರಸ್ತೆಗಳು, ತಾಗಿಕೊಂಡೇ ಇರುವ ಕಟಪಾಡಿ ಬಸ್ ನಿಲ್ದಾಣ ವಾಹನ ಪಾರ್ಕಿಂಗ್ ಏರಿಯಾ ಆಗಿ ಪರಿವರ್ತನೆಗೊಂಡಿದೆ. ಅಂಡರ್‌ಪಾಸ್ ಕಾಮಗಾರಿ ವೈಜ್ಞಾನಿಕ ಮಾದರಿಯಲ್ಲಿ ನಡೆದಲ್ಲಿ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಸಮಿತಿ ಖಜಾಂಚಿ ಡಾ.ಯು.ಕೆ.ಶೆಟ್ಟಿ ಕಟಪಾಡಿ ತಿಳಿಸಿದರು.

ಅಕ್ಟೋಬರ್‌ನಲ್ಲಿ ಅಂಡರ್‌ಪಾಸ್ ಕಾಮಗಾರಿ

ಕಟಪಾಡಿ ಜಂಕ್ಷನ್ ಸಮೀಪ ಉಡುಪಿ ಕಿನ್ನಿಮೂಲ್ಕಿ ಮಾದರಿಯಲ್ಲಿ ₹17 ಕೋಟಿ ವೆಚ್ಚದಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ಟೆಂಡರ್ ಆಗಿದ್ದು, ಅಕ್ಟೋಬರ್‌ನಲ್ಲಿ ಕಾಮಗಾರಿಗೆ ಚಾಲನೆ ದೊರೆಯಲಿದೆ. ಹೆದ್ದಾರಿ ಇಕ್ಕೆಲಗಳಲ್ಲಿ ಸರ್ವೆ ನಡೆಸಿ, ಸರ್ವಿಸ್ ರಸ್ತೆ ಸೇರಿದಂತೆ ಅಗತ್ಯ ಕಾಮಗಾರಿಯನ್ನು ಅಕ್ಟೋಬರ್ ಒಳಗೆ ಮುಗಿಸಿ ಅಂಡರ್‌ಪಾಸ್ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ರಾ.ಹೆ. ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ. ಅಂಡರ್‌ಪಾಸ್ ರಸ್ತೆ ಕಟಪಾಡಿ ಜಂಕ್ಷನ್‌ನಿಂದ 550 ಮೀ. ಉದ್ದದವರೆಗೆ ನಡೆಯಲಿದ್ದು, 5.5 ಮೀ. ಎತ್ತರವಿರಲಿದೆ. ನ್ಯಾಷನಲ್ ಇನ್‌ಫ್ರಾ ಪ್ರಾಜೆಕ್ಟ್ ರಿ. ಕಂಪನಿ ಕಾಮಗಾರಿ ವಹಿಸಿಕೊಂಡಿದೆ. 10 ಕಡೆ ಸರ್ವೀಸ್ ರಸ್ತೆ ನಿರ್ಮಾಣ, 6 ಕಡೆ ಪಾದಚಾರಿ ಮಾರ್ಗ ನಿರ್ಮಾಣ ನಡೆಯಲಿದೆ. ಕಾಮಗಾರಿ ಪೂರ್ಣಗೊಳ್ಳಲು 24 ತಿಂಗಳು ಸಮಯ ತೆಗೆದುಕೊಳ್ಳಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಕೋಟ ಶ್ರೀನಿವಾಸ ಪೂಜಾರಿ
ಡಾ.ಯು.ಕೆ.ಶೆಟ್ಟಿ ಕಟಪಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.