ಉಡುಪಿ: ಕುಂದಾಪುರ ಕಾರ್ಕಳ ತಾಲ್ಲೂಕು ವ್ಯಾಪ್ತಿಯ ಬೆಳ್ವೆ, ಸಿದ್ದಾಪುರ, ವಂಡ್ಸೆ, ನಾಡ, ಕೊಕ್ಕರ್ಣೆ, ದೊಡ್ಡರಂಗಡಿಯಲ್ಲಿ ಶನಿವಾರ 6 ಮಂಗಗಳ ಶವ ಪತ್ತೆಯಾಗಿದೆ. ಈ ಪೈಕಿ ಎರಡು ಮಂಗಗಳ ದೇಹದ ಭಾಗಗಳನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದರು.
ಜ.16ರ ನಂತರ ಕುಕ್ಕುಂದೂರು, ಸಾಣೂರು, ಕೆರ್ವಾಶೆ, ಅಲೆವೂರಿನಲ್ಲಿ ಸಿಕ್ಕಿದ್ದ ಮಂಗನ ಶವಗಳನ್ನು ಮಣಿಪಾಲಕ್ಕೆ ಎಂಸಿವಿಆರ್ ಪರೀಕ್ಷೆಗೆ ಹಾಗೂ ಶಿವಮೊಗ್ಗಕ್ಕೆ ವಿಡಿಎಲ್ ಪರೀಕ್ಷೆಗೆ ಕಳುಹಿಸಲಾಗಿತ್ತು. ನಾಲ್ಕು ಮಂಗಗಳ ದೇಹದಲ್ಲಿ ಕೆಎಫ್ಡಿ ಸೋಂಕು ಪತ್ತೆಯಾಗಿಲ್ಲ ಎಂಬ ವರದಿ ಬಂದಿದೆ ಎಂದು ತಿಳಿಸಿದರು.
ಹಿಂದೆ, ಸೋಂಕು ಕಾಣಿಸಿಕೊಂಡ ಪ್ರದೇಶದಲ್ಲಿ ಮಂಗಗಳ ಶವ ಸಿಕ್ಕರೆ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿಲ್ಲ. ಸೋಂಕು ಇಲ್ಲದ ಪ್ರದೇಶದಲ್ಲಿ ಮಂಗಗಳು ಸತ್ತರೆ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಇದುವರೆಗೂ ಮನುಷ್ಯರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿಲ್ಲ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.