ADVERTISEMENT

ಕುಂದಾಪುರದಲ್ಲಿ ‘ಖಾಕಿ ಕಾರ್ಟೂನ್‌ ಹಬ್ಬ’ ಉದ್ಘಾಟನೆ

ಕಾರ್ಟೂನ್‌ಗಳಲ್ಲಿ ಸಾತ್ವಿಕ ಭಾಷೆಯೊಂದಿಗೆ ಭಿನ್ನ ದೃಷ್ಟಿಕೋನವಿದೆ: ಡಿಜಿಪಿ ಬಿ.ದಯಾನಂದ್‌

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 6:09 IST
Last Updated 16 ನವೆಂಬರ್ 2025, 6:09 IST
ಕುಂದಾಪುರದ ಬೋರ್ಡ್ ಹೈಸ್ಕೂಲಿನ ಕಲಾಮಂದಿರದಲ್ಲಿ ಶನಿವಾರ ನಡೆದ ‘ಖಾಕಿ ಕಾರ್ಟೂನ್‌ ಹಬ್ಬ’ ವನ್ನು ಡಿಜಿಪಿ ಬಿ.ದಯಾನಂದ್ ಕಾರ್ಟೂನ್ ಬಿಡಿಸುವ ಮೂಲಕ ಉದ್ಘಾಟಿಸಿದರು. ಎಸ್‌ಪಿ ಹರಿರಾಂ ಶಂಕರ್, ಜಿ.ಎ.ಬಾವಾ, ವಿನಯ್ ಗಾಂವ್ಕರ್, ಸತೀಶ್ ಆಚಾರ್ಯ ಭಾಗವಹಿಸಿದ್ದರು
ಕುಂದಾಪುರದ ಬೋರ್ಡ್ ಹೈಸ್ಕೂಲಿನ ಕಲಾಮಂದಿರದಲ್ಲಿ ಶನಿವಾರ ನಡೆದ ‘ಖಾಕಿ ಕಾರ್ಟೂನ್‌ ಹಬ್ಬ’ ವನ್ನು ಡಿಜಿಪಿ ಬಿ.ದಯಾನಂದ್ ಕಾರ್ಟೂನ್ ಬಿಡಿಸುವ ಮೂಲಕ ಉದ್ಘಾಟಿಸಿದರು. ಎಸ್‌ಪಿ ಹರಿರಾಂ ಶಂಕರ್, ಜಿ.ಎ.ಬಾವಾ, ವಿನಯ್ ಗಾಂವ್ಕರ್, ಸತೀಶ್ ಆಚಾರ್ಯ ಭಾಗವಹಿಸಿದ್ದರು   

ಕುಂದಾಪುರ: ‘ಸರಳವಾದ ಸಾತ್ವಿಕ ಭಾಷೆಯೊಂದಿಗೆ, ಭಿನ್ನ ದೃಷ್ಟಿಕೋನದೊಂದಿಗೆ ಸಮಾಜವನ್ನು ತಿದ್ದುವ ಕೆಲಸ ನಿರಂತರವಾಗಿ ಮಾಡುತ್ತಿರುವ ಕಾರ್ಟೂನಿಸ್ಟ್‌ಗಳ ಸಾಮಾಜಿಕ ಕೈಂಕರ್ಯ ಮೆಚ್ಚುವಂತದ್ದು’ ಎಂದು ರಾಜ್ಯ ಕಾರಾಗೃಹ ಮತ್ತು ಸುಧಾರಣೆ ಇಲಾಖೆಯ ಪೊಲೀಸ್‌ ಮಹಾನಿರ್ದೇಶಕ ಬಿ.ದಯಾನಂದ್‌ ಹೇಳಿದರು.

ಇಲ್ಲಿನ ಬೋರ್ಡ್ ಹೈಸ್ಕೂಲಿನ ರೋಟರಿ ಕಲಾಮಂದಿರದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಸಹಭಾಗಿತ್ವದೊಂದಿಗೆ ನ. 15ರಿಂದ 19ರವರೆಗೆ ನಡೆಯುವ ‘ಖಾಕಿ ಕಾರ್ಟೂನ್‌ ಹಬ್ಬ’ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜವನ್ನು ಸೂಕ್ಷ್ಮದರ್ಶಕದಂತೆ ಅವಲೋಕಿಸುವ ವ್ಯಂಗ್ಯ ಚಿತ್ರಕಾರರು, ಕಟುವಾಗಿ ಹೇಳಬೇಕಾದುದನ್ನು ಗೆರೆಗಳ ಮೂಲಕ ತಲುಪಿಸುವ ಕೆಲಸ ಮಾಡುತ್ತಾರೆ. ನ್ಯೂನತೆಗಳನ್ನು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಅವರು, ಅದನ್ನು ಬೇರೆಯವರಿಗೂ ಪಸರಿಸರಿಸಲು ಕಾಳಜಿ ವಹಿಸುತ್ತಿರುವುದು ಶ್ಲಾಘನೀಯ. ಕರ್ತವ್ಯಗಳೊಂದಿಗೆ ಬಿಡುವಿಲ್ಲದ ಜೀವನಾಭ್ಯಾಸವಾಗಿರುವ ಪೊಲೀಸರು ತಮ್ಮ ಒಳ್ಳೆಯ ಹವ್ಯಾಸಗಳನ್ನು ಉಳಿಸಿಕೊಳ್ಳಬೇಕು ಎಂದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿ, ‘ಅಧಿಕಾರಿಗಳು ಹಾಗೂ ಸಾಮಾಜಿಕ ಕಳಿಕಳಿಯುಳ್ಳವರು ಎದುರಿಸುವುದಕ್ಕಿಂತ ಹೆಚ್ಚು ವಿರೋಧವನ್ನು ಎದುರಿಸುವ ವ್ಯಂಗ್ಯ ಚಿತ್ರಕಾರರಿಗೆ ಅವರ ಬದ್ಧತೆಯೇ ರಕ್ಷಣೆಯಾಗಿದೆ. ಆಳುವ ವರ್ಗ ಜನವಿರೋಧಿ ನಿಲುವಿಗೆ ಮುಂದಾದರೆ, ಮಹಿಳೆಯರೂ, ಮಕ್ಕಳು, ದಲಿತರು, ಬಡವರ ಬಗ್ಗೆ ಸಮಾಜ ಕಡೆಗಣಿಸಿದರೇ, ತಮ್ಮ ಕಾರ್ಟೂನ್ ಮೂಲಕ ಎಚ್ಚರಿಸುವ ಕೆಲಸವನ್ನು ಸತೀಶ್ ಆಚಾರ್ಯ ಅವರಂತಹ ಕಾರ್ಟೂನಿಸ್ಟ್ ಮಾಡುತ್ತಿದ್ದಾರೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮದ ಆಯೋಜನೆ ಮಾಡಲಾಗಿದ್ದು, 75 ಪೊಲೀಸ್ ಸಿಬ್ಬಂದಿಗಳು ಕಾರ್ಯಾಗಾರದಲ್ಲಿ ವ್ಯಂಗ್ಯಚಿತ್ರ ರಚಿಸುವ ತರಬೇತಿ ಪಡೆದುಕೊಳ್ಳಲಿದ್ದಾರೆ’ ಎಂದು ಹೇಳಿದರು.

ನಿವೃತ್ತ ಪೊಲೀಸ್ ಉಪ ಆಯುಕ್ತರಾದ ಜಿ.ಎ. ಬಾವಾ, ವಿನಯ್ ಗಾಂವ್ಕರ್, ಹಿರಿಯ ವಕೀಲ ಎಎಸ್‌ಎನ್ ಹೆಬ್ಬಾರ್, ಗ್ರಹ ರಕ್ಷಕ ದಳ ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ಮಾತನಾಡಿದರು.

ಪೊಲೀಸ್‌ ಇಲಾಖೆಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಕಾರ್ಕಳ ಗ್ರಾಮಾಂತರ ಠಾಣೆಯ ಎಸ್ಐ ಪ್ರಸನ್ನ, ಆರ್ಮಡ್ ರಿಸರ್ವ್ ಎಸ್ಐ ಜೋಸ್, ಡಿಸಿಆರ್‌ಬಿ ಎಎಸ್ಐ ಪ್ರಕಾಶ್, ಕಂಪ್ಯೂಟರ್ ವಿಭಾಗದ ಆರ್ಮಡ್ ಹೆಡ್‌ ಕಾನ್‌ಸ್ಟೇಬಲ್ ವಿಜಯ ಮೊಗವೀರ, ಡಿಪಿಒ ಸಿವಿಲ್ ಹೆಡ್‌ಕಾನ್‌ಸ್ಟೇಬಲ್ ಶಿವಾನಂದ ಬಿ. ಅವರನ್ನು ಸನ್ಮಾನಿಸಲಾಯಿತು.

ಉಪನ್ಯಾಸಕಿ ರೋಹಿಣಿ ನಿರೂಪಿಸಿದರು. ಕಾರ್ಟೂನ್ ಹಬ್ಬದ ಸಂಘಟಕ, ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ವಂದಿಸಿದರು.

ಕುಂದಾಪುರದ ಬೋರ್ಡ್ ಹೈಸ್ಕೂಲಿನ ಕಲಾಮಂದಿರದಲ್ಲಿ ಶನಿವಾರ ನಡೆದ ‘ಖಾಕಿ ಕಾರ್ಟೂನ್‌ ಹಬ್ಬ’ ದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಗೌರವಿಸಲಾಯಿತು
30 ವರ್ಷದ ಹಿಂದೆ ಅಳುಕಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್‌ ವ್ಯವಸ್ಥೆ ಪ್ರಸ್ತುತ ಇಲ್ಲ
ವಿನಯ್ ಗಾಂವ್ಕರ್ ನಿವೃತ್ತ ಪೊಲೀಸ್ ಉಪ ಆಯುಕ್ತ
ಕೊಲ್ಲೂರು ಸಮೀಪ ಪ್ರಕರಣವೊಂದರ ಸ್ಥಳ ಯಾವ ಸರಹದ್ದಿನದು ಎಂದು ತಿಳಿಯಲು ಜಾಗದ ಸರ್ವೆ ನಡೆಸಿದ ನೆನಪು ಇನ್ನೂ ಇದೆ
ಎಎಸ್‌ಎನ್ ಹೆಬ್ಬಾರ್ ಹಿರಿಯ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.