ಉಡುಪಿ: ಗೋಹತ್ಯೆ ನಿಷೇಧ ಮಸೂದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಗುರುವಾರ ನಗರದಲ್ಲಿ ಮಾತನಾಡಿದ ಅವರು, ಗೋಹತ್ಯೆ ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿದ್ದು, ಪರಿಷತ್ನಲ್ಲಿ ಚರ್ಚೆಗೆ ಬರುವ ಸಂಭವ ಇಲ್ಲದಿರುವುದರಿಂದ ಸುಗ್ರೀವಾಜ್ಞೆ ಮೂಲಕ ಜಾರಿಗೆ ತೀರ್ಮಾನಿಸಿದ್ದೇವೆ ಎಂದರು.
ಹಿಂದೆ ಸಭಾಪತಿಯಾಗಿದ್ದ ಡಿ.ಎಚ್.ಶಂಕರಮೂರ್ತಿ ಅವರ ಮೇಲೆ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ಮಂಡಿಸಿದಾಗ, ಪೀಠದಿಂದ ಕೆಳಗಿಳಿದು ಉಪಸಭಾಪತಿಯನ್ನು ಕೂರಿಸಿ ಅವಿಶ್ವಾಸ ಗೊತ್ತುವಳಿಗೆ ದಿನ ನಿಗದಿ ಮಾಡಿದ್ದರು. ಅವಿಶ್ವಾಸ ಗೆದ್ದು ಮತ್ತೆ ಸಭಾಪತಿ ಪೀಠ ಅಲಂಕರಿಸಿದ್ದರು. ಈಗಲೂ ಅದೇ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ಕಾಂಗ್ರೆಸ್ ಮುಖಂಡರು ಸಭಾಪತಿ ಸ್ಥಾನವನ್ನು ಕಾಂಗ್ರೆಸ್ಸೀಕರಣ ಮಾಡಿದ್ದು, ಸಭಾಪತಿಯ ಮೇಲೆ ಒತ್ತಡ ತಂದು, ಅವರ ಕೈಕಟ್ಟಿಹಾಕಿದ್ದಾರೆ ಎಂದು ಕೋಟ ಟೀಕಿಸಿದರು.
ಸಭಾಪತಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಚರ್ಚೆಗೆ ಹಾಗೂ ಮತದಾನಕ್ಕೆ ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಜೆಡಿಎಸ್ ಕೂಡ ಬೆಂಬಲ ವಾಪಸ್ ಪಡೆಯುವುದಾಗಿ ಹೇಳಿರುವುದರಿಂದ, ಮುಂದೆ ಸಭಾಪತಿ ಯಾರಾಗಬೇಕು ಎಂದು ಪಕ್ಷದ ವರಿಷ್ಠರು ಹಾಗೂ ರಾಜ್ಯ ಘಟಕದ ಅಧ್ಯಕ್ಷರು ನಿರ್ಧರಿಸಲಿದ್ದಾರೆ ಎಂದರು.
ಕೋವಿಡ್ ಕಾರಣಕ್ಕೆ ನಿಂತಿದ್ದ ‘ಸಪ್ತಪದಿ’ ಸಾಮೂಹಿಕ ವಿವಾಹ ಕಾರ್ಯಕ್ರಮ ಜನವರಿಯಿಂದ ಪ್ರತಿ ತಿಂಗಳು ನಡೆಸಲು ನಿರ್ಧರಿಸಲಾಗಿದೆ. ಜನವರಿ 20 ಹಾಗೂ 23ರಂದು ಸಾಮೂಹಿಕ ವಿವಾಹಕ್ಕೆ ದಿನ ನಿಗದಿ ಮಾಡಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.