ಉಡುಪಿ: ಕೋವಿಡ್ ಕಾರಣದಿಂದ ಒಂಬತ್ತು ತಿಂಗಳಿಗೂ ಹೆಚ್ಚುಕಾಲ ಕೃಷ್ಣಮಠದಲ್ಲಿ ಸ್ಥಗಿತವಾಗಿದ್ದ ಅನ್ನಪ್ರಸಾದ ವ್ಯವಸ್ಥೆ ಜ.10ರಿಂದ ಮತ್ತೆ ಆರಂಭವಾಗುತ್ತಿದೆ.
ಅನ್ನಬ್ರಹ್ಮನ ಕ್ಷೇತ್ರ ಎಂದೇ ಹೆಸರಾಗಿರುವ ಕೃಷ್ಣಮಠದಲ್ಲಿ ಮಾರ್ಚ್ 23ರಿಂದ ಅನ್ನ ಪ್ರಸಾದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಮಠಕ್ಕೆ ಭಕ್ತರ ಪ್ರವೇಶವನ್ನೂ ನಿರ್ಬಂಧಿಸಲಾಗಿತ್ತು. ಸೆಪ್ಟೆಂಬರ್ನಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತಾದರೂ ಅನ್ನಪ್ರಸಾದದ ವ್ಯವಸ್ಥೆ ಆರಂಭಿಸಿರಲಿಲ್ಲ. ಪರಿಣಾಮ ಕೃಷ್ಣಮಠಕ್ಕೆ ಬರುವ ಭಕ್ತರಿಗೆ ಭೋಜನದ ವ್ಯವಸ್ಥೆ ಇಲ್ಲದೆ ತೊಂದರೆಯಾಗಿತ್ತು.
ಇದೀಗ ಮತ್ತೆ ಅನ್ನಪ್ರಸಾದದ ವ್ಯವಸ್ಥೆ ಮಾಡಿರುವುದರಿಂದ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ಭಕ್ತರಿಗೆ ಹೆಚ್ಚು ಅನುಕೂಲವಾಗಲಿದೆ. ಭೋಜನ ವ್ಯವಸ್ಥೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಅದಮಾರು ಮಠದಿಂದ ಮಾಡಿಕೊಳ್ಳಲಾಗಿದೆ. ಮೊದಲ ದಿನ 5,000 ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.
ಕೃಷ್ಣಮಠ ಪ್ರವೇಶದ ಮಾರ್ಗವನ್ನೂ ಬದಲಾವಣೆ ಮಾಡಲಾಗಿದ್ದು, ಭಾನುವಾರದಿಂದ ಹೊಸ ಮಾರ್ಗದಲ್ಲಿ ಭಕ್ತರು ದರ್ಶನ ಪಡೆಯಬೇಕಿದೆ. ದರ್ಶನಕ್ಕೆ ತೆರಳಬೇಕಾದ ಮಾರ್ಗದ ವಿವರಗಳನ್ನು ಮಠದಲ್ಲಿ ಹಾಕಲಾಗಿದೆ. ಬೆಳಿಗ್ಗೆ 8ರಿಂದ ಮಧ್ಯಾಹ್ನ 12, ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಭಕ್ತರು ಶ್ರೀಕೃಷ್ಣನ ದರ್ಶನ ಪಡೆಯಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.