ಉಡುಪಿ: ಅದಮಾರು ಮಠದ ಪರ್ಯಾಯ ಅವಧಿ ಮುಕ್ತಾಯವಾಗಿದ್ದು ಕೃಷ್ಣಾಪುರ ಮಠದ ಪರ್ಯಾಯ ಆರಂಭವಾಗಿದೆ. ಪರ್ಯಾಯ ಯತಿಗಳಾದ ವಿದ್ಯಾಸಾಗರ ತೀರ್ಥರು ಮುಂದಿನ 2 ವರ್ಷಗಳ ಕಾಲ ಸರ್ವಜ್ಞ ಪೀಠದಲ್ಲಿರಲಿದ್ದು, ಕೃಷ್ಣನ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ.
ಕೃಷ್ಣಾಪುರ ಮಠದ ಪರ್ಯಾಯ ಪೂರ್ವಭಾವಿಯಾಗಿ ಮಂಗಳವಾರ ನಸುಕಿನಲ್ಲಿ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಸರ್ವಜ್ಞ ಪೀಠವೇರುವ ವಿದ್ಯಾಸಾಗರ ತೀರ್ಥ ಶ್ರೀಗಳು ಬೆಳಗಿನ ಜಾವ 2.15ಕ್ಕೆ ಕಾಪುಬಳಿಯ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ, ಉಡುಪಿಯ ಜೋಡುಕಟ್ಟೆ ಮಂಟಪಕ್ಕೆ ಆಗಮಿಸಿ, ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ, ಪರ್ಯಾಯ ಮೆರವಣಿಗೆಯಲ್ಲಿ ರಥಬೀದಿಗೆ ಬರಲಿದ್ದಾರೆ.
ಬಳಿಕ ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡಿ, ಚಂದ್ರಮೌಳೀಶ್ವರ, ಅನಂತೇಶ್ವರ ಹಾಗೂ ಮಧ್ವಾಚಾರ್ಯರ ಸನ್ನಿಧಿಯ ದರ್ಶನ ಮಾಡಲಿದ್ದಾರೆ. ನಂತರ ಅದಮಾರು ಮಠದ ಈಶಪ್ರಿಯ ತೀರ್ಥರಿಂದ ಅಕ್ಷಯ ಪಾತ್ರೆ, ಬೆಳ್ಳಿಯ ಸುಟ್ಟುಗ, ಗರ್ಭಗುಡಿಯ ಕೀಲಿಕೈ ಪಡೆದು ಬೆಳಿಗ್ಗೆ 5.55ರ ಶುಭ ಮುಹೂರ್ತದಲ್ಲಿ ಪವಿತ್ರ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ.
ಬಳಿಕ ಪರ್ಯಾಯ ಶ್ರೀಗಳಿಂದ ಬಡಗುಮಾಳಿಗೆಯ ಅರಳು ಗದ್ದುಗೆಯಲ್ಲಿ ಗಂಧಾದ್ಯುಪಚಾರ, ಪಟ್ಟ ಕಾಣಿಕೆ ಹಾಗೂ ಮಾಲಿಕೆ ಮಂಗಳಾರತಿ ನಡೆಯಲಿದ್ದು, ರಾಜಾಂಗಣದಲ್ಲಿ ಅಷ್ಟಮಠಾಧೀಶರ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಪರ್ಯಾಯ ದರ್ಬಾರ್ ನಡೆಯಲಿದೆ. ಬೆಳಿಗ್ಗೆ 10ಕ್ಕೆ ಪರ್ಯಾಯ ಯತಿಗಳುಕೃಷ್ಣನಿಗೆ ಮಹಾಪೂಜೆ ನೆರವೇರಿಸಲಿದ್ದಾರೆ. ರಾತ್ರಿ 7ಗಂಟೆಗೆ ಬ್ರಹ್ಮ ರಥೋತ್ಸವದ ಮೂಲಕ ಪರ್ಯಾಯ ಉತ್ಸವ ಸಂಪನ್ನಗೊಳ್ಳಲಿದೆ.
ಕೃಷ್ಣಾಫುರ ಮಠದ ವಿದ್ಯಾಸಾಗರ ತೀರ್ಥರು ಜ.17, 2024ರವರೆಗೂ ಪರ್ಯಾಯ ಪೀಠದಲ್ಲಿರಲಿದ್ದು, ಕೃಷ್ಣನ ಪೂಜೆ ಸಹಿತ ಕೃಷ್ಣ ಮಠದ ಸಂಪೂರ್ಣ ಆಡಳಿತವನ್ನು ನಿಭಾಯಿಸಲಿದ್ದಾರೆ. ಈಗಾಗಲೇ ಮೂರು ಬಾರಿ ಪರ್ಯಾಯ ನಡೆಸಿರುವ ಯತಿಗಳಿಗೆ ಇದು ನಾಲ್ಕನೇ ಪರ್ಯಾಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.