ADVERTISEMENT

ಕುಂದಾಪುರ: ಶಾರದಾ ಪೀಠಕ್ಕೆ ಸಂಬಂಧಿಸಿದ ಶಾಸನ ಪತ್ತೆ

ಶೃಂಗೇರಿ ಪೀಠಾಧಿಪತಿಗಳಿಂದ ಜ್ಞಾನೇಂದ್ರ ಭಾರತಿ ಗುರುಗಳಿಗೆ ಭೂ ದಾನ ನೀಡಿರುವ ಬಗ್ಗೆ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 14:35 IST
Last Updated 28 ಮಾರ್ಚ್ 2025, 14:35 IST
ಕುಂದಾಪುರ ತಾಲ್ಲೂಕಿನ ಶಂಕರನಾರಾಯಣ ಸಮೀಪದ ಹೆರವಳ್ಳಿ ಎಂಬಲ್ಲಿನ ಪ್ರಶಾಂತ್ ಹೆಗ್ಡೆ ಅವರ ಮನೆಯ ಅಂಗಳದಲ್ಲಿ ಪತ್ತೆಯಾಗಿರುವ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಕ್ಕೆ ಸಂಬಂಧಿಸಿದ ಅಪ್ರಕಟಿತ ಶಿಲಾಶಾಸನ.
ಕುಂದಾಪುರ ತಾಲ್ಲೂಕಿನ ಶಂಕರನಾರಾಯಣ ಸಮೀಪದ ಹೆರವಳ್ಳಿ ಎಂಬಲ್ಲಿನ ಪ್ರಶಾಂತ್ ಹೆಗ್ಡೆ ಅವರ ಮನೆಯ ಅಂಗಳದಲ್ಲಿ ಪತ್ತೆಯಾಗಿರುವ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಕ್ಕೆ ಸಂಬಂಧಿಸಿದ ಅಪ್ರಕಟಿತ ಶಿಲಾಶಾಸನ.   

ಕುಂದಾಪುರ: ಶೃಂಗೇರಿ ಶಾರದಾ ಪೀಠದ 14ನೇ ಪೀಠಾಧಿಪತಿ ಹಾಲಾಡಿ ಒಡೆಯರೆಂದೇ ಖ್ಯಾತರಾಗಿದ್ದ ಜಗದ್ಗುರು ನರಸಿಂಹ ಭಾರತಿ ಸ್ವಾಮೀಜಿ (ಕ್ರಿ.ಶ. 1389–1418) ಅವರು ತೀರ್ಥಮುತ್ತೂರು ಮಠದ ಜ್ಞಾನೇಂದ್ರಭಾರತಿ ಗುರುಗಳಿಗೆ ಭೂದಾನ ನೀಡಿರುವ ಶಿಲಾಶಾಸನ ತಾಲ್ಲೂಕಿನ ಶಂಕರನಾರಾಯಣ ಗ್ರಾಮದ ಹೆರವಳ್ಳಿಯ ಪ್ರಶಾಂತ್ ಹೆಗ್ಡೆ ಅವರ ಮನೆ ಅಂಗಳದಲ್ಲಿ ಪತ್ತೆಯಾಗಿದೆ.

ಕ್ರಿ.ಶ 1399 ಮೇ 1 ಬುಧವಾರದ ಕಾಲಘಟ್ಟಕ್ಕೆ ಸರಿಹೊಂದುವ ಶಾಸನ ಇದಾಗಿದೆ. ಶಾಸನದ ಮೇಲ್ಬಾಗದಲ್ಲಿ ಸೂರ್ಯ– ಚಂದ್ರ ಕೆತ್ತನೆ, ಬಲಭಾಗದಲ್ಲಿ ಭಕ್ತನ ಚಿತ್ರದ ಕೆತ್ತನೆ, ದೀಪದ ಕಂಬ, ಮಧ್ಯಭಾಗದಲ್ಲಿ ಶಿವಲಿಂಗ, ಎಡಭಾಗದಲ್ಲಿ ಕರುವಿಗೆ ಹಾಲುಣಿಸುವ ಗೋವಿನ ಚಿತ್ರದ ಕೆತ್ತನೆ ಇದೆ. ಕನ್ನಡ ಭಾಷೆ, ಲಿಪಿಯಲ್ಲಿ ಶಾಸನವಿದ್ದು, 5 ಅಡಿಗಿಂತ ಹೆಚ್ಚು ಎತ್ತರವಿದೆ. ವಿಜಯನಗರದ ಅರಸ ಇಮ್ಮಡಿ ಹರಿಹರರಾಯನ ಕಾಲಘಟ್ಟದ ಶಾಸನವಾಗಿದ್ದು, ‘ಹಾರದವಳ್ಳಿ’ ಎಂದು ಉಲ್ಲೇಖಿಸಲಾಗಿದ್ದು, ಪ್ರಸ್ತುತ ಈ ಊರನ್ನು ಹೆರವಳ್ಳಿ ಎಂದು ಕರೆಯಲಾಗುತ್ತಿದೆ.

ಶಾಸನದಲ್ಲಿ 35 ಸಾಲುಗಳು ಮೇಲ್ಭಾಗದಲ್ಲಿ ಕಂಡು ಬಂದಿವೆ. ಬೊಮ್ಮಣ್ಣ, ಸಿಂಗಸೆಟ್ಟಿ, ಗೋವಿಂದ ಭಟ್ಟ, ಕೃಷ್ಣ ಸೇನಾಭೊವ, ಶಂಕರನಾರಾಯಣ ಎಂಬ ಸ್ಥಳದ ಹೆಸರುಗಳ ಉಲ್ಲೇಖವಿದೆ ಎಂದು ಶಾಸನತಜ್ಞ ಬೆಂಗಳೂರಿನ ಎಸ್. ಕಾರ್ತಿಕ್ ತಿಳಿಸಿದ್ದಾರೆ.

ADVERTISEMENT

ಕ್ರೋಢ ಶಂಕರನಾರಾಯಣ ದೇವಸ್ಥಾನದ ಅರ್ಚಕ ಶಿವಪ್ರಸಾದ್ ಅಡಿಗರಿಗೆ ಸ್ಥಳೀಯರಿಂದ ಈ ಶಾಸನವಿರುವ ಕುರಿತು ಮಾಹಿತಿ ತಿಳಿದುಬಂದಿತ್ತು. ಅವರಿಂದ ಮಾಹಿತಿ ಪಡೆದುಕೊಂಡ ಪಂಚಗ್ರಾಮ ಸಮುದಾಯದ ಕುರಿತು ಪಿಎಚ್‌ಡಿ ಅಧ್ಯಯನ ಮಾಡುತ್ತಿರುವ ತುಮಕೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ, ಪ್ರಸ್ತುತ ಭಟ್ಕಳದ ಸರ್ಕಾರಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕಿಯಾಗಿರುವ ವೈಶಾಲಿ ಜಿ.ಆರ್. ಅವರು ಶಾಸನವನ್ನು ಸ್ವಚ್ಚಗೊಳಿಸಿ, ಸಂಶೋಧನಾ ವಿದ್ಯಾರ್ಥಿ ಶಶಿಕುಮಾರ ನಾಯ್ಕ್ ಅವರೊಂದಿಗೆ ಪ್ರತಿ ತೆಗೆದಿದ್ದಾರೆ. ತುಮಕೂರು ವಿವಿ ಪುರಾತತ್ವ ಮತ್ತು ಇತಿಹಾಸ ವಿಭಾಗದ ಅಧ್ಯಕ್ಷ ಪ್ರೊ.ಎಂ. ಕೊಟ್ರೇಶ್ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ.

ಕುಂದಾಪುರ ಸಮೀಪದ ಕುಂಭಾಸಿಯಲ್ಲಿ ಶೃಂಗೇರಿ ಪೀಠದ ಕುಂದಾಪುರ ಪ್ರಾಂತ್ಯದ ಮೊದಲ ಶೃಂಗೇರಿ ಶಂಕರ ಮಠದ ಲೋಕಾರ್ಪಣೆ ಸಂದರ್ಭದಲ್ಲಿಯೇ ಶಾಸನ ಪತ್ತೆಯಾಗಿರುವುದು ಹೊಸ ಚಿಂತನೆಗಳನ್ನು ಹುಟ್ಟು ಹಾಕಿದೆ. 

ತೀರ್ಥಮುತ್ತೂರು ಮಠದ ಮೂಲ ಮಠವಾಗಿರುವ, ಪಂಚಗ್ರಾಮ ಬ್ರಾಹ್ಮಣ ಸಮುದಾಯಕ್ಕೆ ಸಂಬಂಧಿಸಿರುವ ಶಂಕರನಾರಾಯಣ ಕೆಳಮಠದಲ್ಲಿ ದೊರೆತಿರುವ ಈ ಅಮೂಲ್ಯ ಶಾಸನದಿಂದ ಭವಿಷ್ಯದ ಅಧ್ಯಯನ, ಪೂರ್ವ ಇತಿಹಾಸಗಳ ಮೇಲೆ ಬೆಳಕು ಚಲ್ಲಲು ಅನೂಕೂಲವಾಗುತ್ತದೆ ಎಂದು ವೈಶಾಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಸನದ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ಮೈಸೂರಿನ ಪ್ರಾಚ್ಯ ಇಲಾಖೆಯ ಸಂಶೋಧಕರು ಭೇಟಿ ನೀಡಲಿದ್ದಾರೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಹಲವು ವರ್ಷಗಳ ಹಿಂದೆ ಕಳ್ಳರು ನಿಧಿ ಆಸೆಗಾಗಿ ಈ ಶಾಸನವನ್ನು ಅಗೆಯುವ ಸಂದರ್ಭದಲ್ಲಿ ಶಾಸನದ ಸ್ವಲ್ಪ ಭಾಗ ತುಂಡಾಗಿತ್ತು. ಅದನ್ನು ಪುನರ್ ಜೋಡಿಸಿರುವ ಪ್ರಶಾಂತ್ ಹೆಗ್ಡೆ ಅವರ ಮನೆಯವರು ಶಾಸನವನ್ನು ಸಂರಕ್ಷಣೆ ಮಾಡಿದ್ದು, ಪ್ರತಿ ವರ್ಷ ಹೆಗ್ಡೆ ಕುಟುಂಬದವರು ಶಾಸನಕ್ಕೆ ಪೂಜೆ ಸಲ್ಲಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ.

2–3 ದಿನಗಳಿಂದ ದಕ್ಷಿಣಾಮ್ನಾಯ ಶಾರದಾ ಪೀಠದ ವಿಧುಶೇಖರ ಭಾರತಿ ಸ್ವಾಮೀಜಿ ಅವರು ಕುಂದಾಪುರ ಪರಿಸರದಲ್ಲಿಯೇ ಮೊಕ್ಕಾಂ ಇದ್ದು, ಶಾರದಾ ಪೀಠಕ್ಕೆ ಸಂಬಂಧಿಸಿದ ಶಾಸನ ಪತ್ತೆಯಾಗಿರುವುದು ಮಠದ ಭಕ್ತರ ಸಂತಸವನ್ನು ಹೆಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.