ADVERTISEMENT

ಹಿಂದೂಗಳ ದಮನಕ್ಕೆ ಯತ್ನ: ಸಂಸದ ಬಿ.ವೈ.ರಾಘವೇಂದ್ರ

ಸ್ವಾವಲಂಬಿ ಭಾರತ ಅಭಿಯಾನದಲ್ಲಿ ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 5:13 IST
Last Updated 27 ಡಿಸೆಂಬರ್ 2022, 5:13 IST
ಅಭಿಯಾನವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಇದ್ದರು
ಅಭಿಯಾನವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಇದ್ದರು   

ಕುಂದಾಪುರ: ಸ್ವಾತಂತ್ರ್ಯ ಸಿಕ್ಕಾಗ ಧರ್ಮದ ಆಧಾರದಲ್ಲಿ ದೇಶ ವಿಭಜನೆಯಾಗಿದ್ದರೂ, ಹಿಂದೂ ಯುವಕರನ್ನು ದಮನಿಸುವ ಕೆಲಸ ಇನ್ನೂ ನಡೆಯುತ್ತಲೇ ಇದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ತ್ರಾಸಿಯ ಅಣ್ಣಪ್ಪಯ್ಯ ಸಭಾಭವನದಲ್ಲಿ‌ ಸೋಮವಾರ ನಡೆದ ಬೈಂದೂರು ವಲಯದ ಸ್ವಾವಲಂಬಿ ಭಾರತ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮತಾಂಧ ಶಕ್ತಿಗಳ ಷಡ್ಯಂತ್ರಕ್ಕೆ ಪ್ರವೀಣ್ ನೆಟ್ಟಾರು, ಹರ್ಷ ಅವರಂತಹ ಯುವಕರ ಬಲಿಯಾಗುತ್ತಿದೆ. ಎಲ್ಲ ರಂಗದಲ್ಲೂ ದೇಶವನ್ನು ಸ್ವಾವಲಂಬಿ ಯನ್ನಾಗಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡು, ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರು ಪ್ರತಿ ಮನೆಗೂ ಇದನ್ನು ತಲುಪಿಸುವ ಕಾರ್ಯವೇ ಸ್ವಾವಲಂಬಿ ಭಾರತ ಅಭಿಯಾನ ಎಂದು ಅವರು ಹೇಳಿದರು.

ADVERTISEMENT

ಬೈಂದೂರಿನ 1.15 ಲಕ್ಷ ರೈತರಿಗೆ ಕೃಷಿ ಸಮ್ಮಾನ್ ಯೋಜನೆಯ 12ನೇ ಕಂತು ಪಾವತಿಯಾಗಿದೆ. ರೈತರಿಗೆ ಉಚಿತ ವಿದ್ಯುತ್ ಸೇರಿದಂತೆ ಬಿಜೆಪಿ ಸರ್ಕಾರ ರೈತರು, ಬಡ - ಮಧ್ಯಮ ವರ್ಗದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ಅವರು ಪ್ರತಿಪಾದಿಸಿದರು.

ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಾವಲಂಬಿ ಭಾರತ ಅಭಿಯಾನದ ಜಿಲ್ಲಾ ಸಂಯೋಜಕ ವಿಜಯ ಕೊಡವೂರು ಕಾರ್ಯಕ್ರಮದ ರೂಪು-ರೇಷೆಗಳ ಕುರಿತಂತೆ ಮಾಹಿತಿ ನೀಡಿದರು. ಸಹ ಸಂಯೋಜಕ ಪ್ರಸನ್ನ ಕುಮಾರ್ ಉಪ್ಪುಂದ ಸ್ವಾಗತಿಸಿದರು.

‘ಕ್ಷೇತ್ರದ ಅಭಿವೃದ್ಧಿಯೇ ಗುರಿ’

ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ. ರಾಷ್ಟ್ರ ಅಥವಾ ರಾಜ್ಯ ರಾಜಕಾರಣದ ಬಗ್ಗೆ ಹೆಚ್ಚು ಆಸಕ್ತಿ ಇಲ್ಲ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು. ಮಾಧ್ಯಮ‌ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಅವರು ಕಟ್ಟಿರುವ ಪಕ್ಷದ ಬಗ್ಗೆ ಭವಿಷ್ಯದಲ್ಲಿ ಗೊತ್ತಾಗಲಿದೆ. ವ್ಯಕ್ತಿಗೋಸ್ಕರ ಪಕ್ಷವಲ್ಲ, ದೇಶಕ್ಕೋಸ್ಕರ ಪಕ್ಷ ಎಂಬ ಧ್ಯೇಯ ರೈತ‌ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರದಾಗಿತ್ತು. ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ದೂರ ಸರಿಯುವ ಅಪೇಕ್ಷೆ ಹೊಂದಿದ್ದು ಶಿಕಾರಿಪುರದ ಕಾರ್ಯಕರ್ತರ ಅಭಿಪ್ರಾಯದಂತೆ ವಿಜಯೇಂದ್ರ ಅವರನ್ನು ಸ್ಪರ್ಧೆಗಿಳಿಸಲು ಪಕ್ಷಕ್ಕೆ ವಿನಂತಿ ಮಾಡಿಕೊಂಡಿದ್ದಾರೆ’ ಎಂದರು.

ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಸರಿಯಲ್ಲ: ಅಭಿವೃದ್ಧಿ ವಿಚಾರಗಳಲ್ಲಿ ರಾಜಕಾರಣ ಬದಿಗಿಟ್ಟು, ಬಂದಂತಹ ಅನುದಾನವನ್ನು ಸರಿಯಾಗಿ ಬಳಸಿಕೊಂಡರೆ, ಅದು ನಮ್ಮೂರ ಆಸ್ತಿಯಾಗುತ್ತದೆ. ಬೈಂದೂರಿನಲ್ಲಿ ಕವಿ ಅಡಿಗರ ಹೆಸರಿನಲ್ಲಿ ಸುಸಜ್ಜಿತ ಪುರಭವನ ಆಗಬೇಕು ಎನ್ನುವ ಇಚ್ಛೆಯಿದ್ದು ಇದಕ್ಕೆ ಸಂಸದರ ಅಥವಾ ಶಾಸಕರ ಹೆಸರು ಇಡುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.