ಕುಂದಾಪುರ: ಇಲ್ಲಿನ ಹೋಲಿ ರೊಜರಿ ಮಾತೆ ಇಗರ್ಜಿಯ 453ನೇ ವಾರ್ಷಿಕ ಹಬ್ಬವನ್ನು ಶನಿವಾರ ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು.
ಪವಿತ್ರ ಬಲಿದಾನ ಅರ್ಪಿಸಿ ಮಾತನಾಡಿದ ಶಿವಮೊಗ್ಗ ಧರ್ಮಪ್ರಾಂತ್ಯದ ಯುವಜನ ನಿರ್ದೇಶಕ ಹಾಗೂ ಹೊಸನಗರ ಚರ್ಚ್ ಧರ್ಮಗುರು ಪಿಯುಸ್ ಡಿಸೋಜಾ, ಮೇರಿ ಮಾತೆ ಪ್ರೀತಿ ಹಾಗೂ ದಯೆ ತೋರಿಸುತ್ತಾರೆ. ನಮಗೋಸ್ಕರ ಸದಾಕಾಲ ಪುತ್ರ ಯೇಸುವಿನಲ್ಲಿ ಬೇಡುತ್ತಾರೆ. ಯೇಸು ಸ್ವಾಮಿಯನ್ನು ಶಿಲುಬೆಗೇರಿಸಿದ ಬಳಿಕ, ಅವರ ಶಿಷ್ಯ ವೃಂದದವರಿಗೆ ಧೈರ್ಯ ತುಂಬಿದ ಮೇರಿ ಮಾತೆಯ ಇನ್ನೊಂದು ಹೆಸರೇ ರೋಜರಿ ಮಾತೆ’ ಎಂದರು.
‘ನಿತ್ಯವೂ ಜಪಿಸುತ್ತಿದ್ದ ಮೇರಿ ಮಾತೆ ನೆರೆಹೊರೆಯವರ ಸಹಾಯಕ್ಕಾಗಿ ಯೇಸುವಿನಿಂದ ಪವಾಡ ಮಾಡಿಸುತ್ತಿದ್ದರು. ಯಾವ ಕುಟುಂಬ ಒಟ್ಟಿಗೆ ಕೂಡಿ ಪ್ರಾರ್ಥನೆ ಸಲ್ಲಿಸುತ್ತಾರೋ, ಆ ಕುಟುಂಬ ಸದಾ ಒಳ್ಳೆಯ ಬಾಳುನ್ನು ಬಾಳುತ್ತಾರೆ’ ಎಂದು ಅವರು ಹೇಳಿದರು.
ಹಬ್ಬದ ಸಂದೇಶ ನೀಡಿದ ಕುಂದಾಪುರ ವಲಯ ಪ್ರಧಾನ ಧರ್ಮಗುರು ಸ್ಟ್ಯಾನಿ ತಾವ್ರೊ ಶುಭ ಹಾರೈಸಿದರು.
ಹಬ್ಬದ ತಯಾರಿಗಾಗಿ ಮೂರು ದಿನ ನಡೆದ ಧ್ಯಾನಕೂಟವನ್ನು ಧರ್ಮಗುರು ಪಿಯುಸ್ ಡಿಸೋಜಾ ನಡೆಸಿಕೊಟ್ಟರು. ಇಗರ್ಜಿಯ ಸಹಾಯಕ ಧರ್ಮಗುರು ಅಶ್ವಿನ್ ಆರಾನ್ಹಾ, ಪಾಲನಾ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು ಹಾಗೂ ಧರ್ಮ ಭಗಿನಿಯರು ಭಕ್ತಾಧಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.