ಕುಂಜಾಲು(ಬ್ರಹ್ಮಾವರ): ‘ವಿದ್ಯಾರ್ಥಿಗಳ ಕಲಿಕಾ ನ್ಯೂನತೆ, ಪರಿಕರಗಳ ಕೊರತೆ ಹೋಗಲಾಡಿಸಿ ಮುಕ್ತ ಶೈಕ್ಷಣಿಕ ವಾತಾವರಣ ನಿರ್ಮಿಸುವುದೇ ಶಿಕ್ಷಣ ಸಂಸ್ಥೆಗಳ ಆದ್ಯತೆಯಾಗಿರಬೇಕು’ ಎಂದು ರೋಟರಿಯ ಅಸಿಸ್ಟೆಂಟ್ ಗವರ್ನರ್ ರಾಘವೇಂದ್ರ ಸಾಮಗ ಹೇಳಿದರು.
ಕುಂಜಾಲು ವಿಶ್ವ ಕೀರ್ತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೋಪಕರಣಗಳ ವಿತರಣಾ ಸಮಾರಂಭದಲ್ಲಿ ಶಿಕ್ಷಣದ ಮಹತ್ವದ ಕುರಿತು ಅವರು ಮಾತನಾಡಿದರು.
ಮೂಲ ಶಿಕ್ಷಣ ಮತ್ತು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಅನುದಾನಿತ ಮತ್ತು ಸರ್ಕಾರಿ ಶಾಲೆಗಳೆಂದು ಸರ್ಕಾರದ ಮಲತಾಯಿ ಧೋರಣೆಗಳು ಬದಲಾಗದೆ ಶಿಕ್ಷಣದ ವ್ಯವಸ್ಥೆ ಸುಗಮವಾಗಿ ಸಾಗಲಾರದು ಎಂದರು.
ಉಡುಪಿ ಅಧ್ಯಕ್ಷ ಗುರುರಾಜ ಭಟ್, ‘ಕನ್ನಡ ಮಾಧ್ಯಮದಲ್ಲಿ ಮೂಲ ಶಿಕ್ಷಣ ಒದಗಿಸುವ ಶಿಕ್ಷಣ ಸಂಸ್ಥೆಗಳಿಗೆ ಬೆಂಬಲ ನೀಡಲೇಬೇಕಾಗಿದೆ. ರೋಟರಿ ಅಭಿಯಾನದಲ್ಲಿ ಮೂಲ ಶಿಕ್ಷಣ ಮತ್ತು ಸಾಕ್ಷರತೆಗೆ ವಿಶೇಷ ಒತ್ತು ನೀಡಲಾಗಿದೆ. ರೋಟರಿ ಪ್ರತಿಷ್ಠಾನದ ಅನುದಾನದ ಬೆಂಬಲ ಪಡೆಯಲು ವಿಶ್ವಕೀರ್ತಿ ಅತ್ಯಂತ ಅರ್ಹವಾಗಿದೆ. ಈ ನೆಲೆಯಲ್ಲಿ ರೋಟರಿ ಉಡುಪಿ ಸರ್ವ ವಿಧದಲ್ಲಿ ನೆರವಾಗಲಿದೆ’ ಎಂದು ತಿಳಿಸಿದರು.
ಇದೇ ಸಂದರ್ಭ ಮೈಸೂರಿನ ಯುವ ಉದ್ಯಮಿ ಎಂ.ಎಸ್.ಮಂಜು ಒದಗಿಸಿದ ಪುಸ್ತಕ, ಲೇಖನ ಸಾಮಗ್ರಿ ಮತ್ತು ಕಂಪ್ಯೂಟರ್ ಯುಪಿಎಸ್ಗಳನ್ನು ಅವರು ಸಾಂಕೇತಿಕವಾಗಿ ವಿತರಿಸಿ ಶುಭ ಹಾರೈಸಿದರು.
ಬೆಂಗಳೂರಿನ ಉದ್ಯಮಿ ರವೀಂದ್ರ ರಾವ್ ಅವರು ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ಗಳನ್ನು ಕೊಡುಗೆಯಾಗಿ ನೀಡಿದರು. ರೋಟರಿ ಉಡುಪಿ ವತಿಯಿಂದ ವಿದ್ಯಾರ್ಥಿಗಳಿಗೆ ಕೊಡೆಗಳನ್ನು ವಿತರಿಸಲಾಯಿತು.
ಶಾಲೆಯ ನಿವೃತ್ತ ಶಿಕ್ಷಕ ಪಾಂಡುರಂಗ ನಾಯ್ಕ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಶಾಲಾ ನಿರ್ವಹಣಾ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಬಾಸ್ರಿ ಅಧ್ಯಕ್ಷತೆ ವಹಿಸಿದ್ದರು. ನೀಲಾವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಮೇಶ ಪೂಜಾರಿ, ಪಿ.ಡಿ.ಒ ಗೀತಾ ಬಾಳಿಗ ಇದ್ದರು. ಶಾಲಾ ಮುಖ್ಯ ಶಿಕ್ಷಕ ಬಾಲಚಂದ್ರ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಶಿಕ್ಷಕಿ ಸುಮನ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.