ADVERTISEMENT

ಸಮಾಜಕ್ಕೆ ಪ್ರೀತಿ, ಶಾಂತಿ ಹಂಚೋಣ

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಜೆರಾಲ್ಡ್ ಐಸಾಕ್‌ ಲೋಬೊ ಕರೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 13:12 IST
Last Updated 19 ಡಿಸೆಂಬರ್ 2018, 13:12 IST
ಸ್ನೇಹಕೂಟದಲ್ಲಿ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್‌ ಲೋಬೊ ಮಾತನಾಡಿದರು
ಸ್ನೇಹಕೂಟದಲ್ಲಿ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್‌ ಲೋಬೊ ಮಾತನಾಡಿದರು   

ಉಡುಪಿ: ಸಮಾಜಕ್ಕೆ ಪ್ರೀತಿ ಹಾಗೂ ಶಾಂತಿಯನ್ನು ಹಂಚುವುದು ಕ್ರಿಸ್‌ಮಸ್‌ ಹಬ್ಬದ ಧ್ಯೇಯ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಜೆರಾಲ್ಡ್ ಐಸಾಕ್‌ ಲೋಬೊ ಹೇಳಿದರು.

ನಗರದ ಶೋಕಮಾತಾ ಚರ್ಚ್‌ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ರಿಸ್ಮಸ್‌ ಸ್ನೇಹಕೂಟದಲ್ಲಿ ಮಾತನಾಡಿದ ಅವರು, ‘ಯೇಸು ಕ್ರಿಸ್ತನು ಪ್ರಪಂಚಕ್ಕೆ ಕಾಲಿಟ್ಟ ಸಂಭ್ರಮವನ್ನು ಕ್ರಿಸ್‌ಮಸ್‌ ಆಗಿ ಆಚರಿಸಲಾಗುತ್ತದೆ. ಮನುಕುಲದ ಉದ್ಧಾರಕ್ಕಾಗಿ ಯೇಸು ಶಿಲುಬೆಗೇರುವ ಮೂಲಕ ಪ್ರಾಣವನ್ನು ಅರ್ಪಣೆ ಮಾಡಿದರು. ಪ್ರೀತಿಯ ನಿಜವಾದ ಅರ್ಥ ತ್ಯಾಗದಲ್ಲಿ ಅಡಗಿದೆ ಎಂದರು.

ಯೇಸುವಿನ ಅಣತಿಯಂತೆ ಪ್ರೀತಿ ಹಾಗೂ ಶಾಂತಿ ಹಂಚುವ ಮೂಲಕ ಬದುಕನ್ನು ಸಾರ್ಥಕಗೊಳಿಸೋಣ. ಪ್ರೀತಿಯನ್ನು ಹಂಚುವುದರಲ್ಲಿ ಹೆಚ್ಚು ಖುಷಿ ಇದೆ. ಹಾಗಾಗಿ, ಈ ಸ್ನೇಹಕೂಟ ಆಯೋಜಿಸಲಾಗಿದೆ ಎಂದರು.‌

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಸಂತೋಷವನ್ನು ಹಂಚಿಕೊಂಡರೆ ಖುಷಿ ದ್ವಿಗುಣವಾಗುತ್ತದೆ. ದುಃಖವನ್ನು ಮತ್ತೊಬ್ಬರ ಬಳಿ ಹೇಳಿಕೊಂಡರೆ ಮನಸ್ಸು ನಿರಾಳವಾಗುತ್ತದೆ. ಕ್ರಿಸ್‌ಮಸ್ ಹಬ್ಬದ ಸಂತೋಷವನ್ನು ಎಲ್ಲರೊಟ್ಟಿಗೆ ಹಂಚಿಕೊಳ್ಳೋಣ ಎಂದರು.

ಎಲ್ಲ ಧರ್ಮಗಳು ಶಾಂತಿಯ ಸಂದೇಶವನ್ನೇ ನೀಡುತ್ತವೆ. ಹೊಸವರ್ಷ ಬರುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ. ಎಲ್ಲರಿಗೂ ಹರ್ಷ ತರಲಿ ಎಂದು ಆಶಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾತನಾಡಿ, ಅಸೂಹೆ, ಮತ್ಸರದಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಮನುಷ್ಯರನ್ನು ಗೌರವಿಸುವ, ಪ್ರೀತಿಸುವ ಗುಣ ಬೆಳೆಸಿಕೊಳ್ಳೋಣ ಎಂದರು.‌

ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ಸನ್‌ ಫೆರ್ನಾಂಡೀಸ್‌ ಸ್ವಾಗತಿಸಿದರು. ಚೇತನ್‌ ಲೋಬೋ ಕಾರ್ಯಕ್ರಮ ನಿರೂಪಿಸಿದರು. ಮೈಕಲ್‌ ರೋಡ್ರಿಗಸ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.