ADVERTISEMENT

ಪಂಚಭೂತಗಳಲ್ಲಿ ಮಧುಕರ ಶೆಟ್ಟಿ ಲೀನ: ದಕ್ಷ ಅಧಿಕಾರಿಯ ನೆನೆದು ಕಣ್ಣೀರಿಟ್ಟ ಜನ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 9:16 IST
Last Updated 30 ಡಿಸೆಂಬರ್ 2018, 9:16 IST
   

ಉಡುಪಿ: ಐಪಿಎಸ್‌ ಅಧಿಕಾರಿ ಮಧುಕರ ಶೆಟ್ಟಿ ಅವರ ಅಂತ್ಯಕ್ರಿಯೆ ಭಾನುವಾರ ಕುಂದಾಪುರ ತಾಲ್ಲೂಕಿನ ಯಡಾಡಿ–ಮತ್ಯಾಡಿ ಗ್ರಾಮದ ರೈ ಫಾರ್ಮ್‌ಹೌಸ್‌ನಲ್ಲಿ ನೆರವೇರಿತು.

ತಂದೆ ವಡ್ಡರ್ಸೆ ರಘುರಾಮ ಶೆಟ್ಟಿ, ತಾಯಿ ಪ್ರಫುಲ್ಲ ಶೆಟ್ಟಿ ಅವರ ಸಮಾಧಿಯ ಪಕ್ಕದಲ್ಲೇ ಮಧುಕರ ಶೆಟ್ಟಿ ಅವರ ಅಂತ್ಯ ಸಂಸ್ಕಾರ ನಡೆಯಿತು. ದಕ್ಷ ಅಧಿಕಾರಿಯ ಸಾವಿಗೆ ಸಾವಿರಾರು ಜನರು ಕಂಬನಿ ಮಿಡಿದರು.

ಮಧುಕರ ಶೆಟ್ಟಿ ಅವರ ಅಂತ್ಯಸಂಸ್ಕಾರ ಭಾನುವಾರ ನಡೆಯಿತು

ಅಂತ್ಯಕ್ರಿಯೆಗೂ ಮುನ್ನ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಅಪಾರ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

ADVERTISEMENT

ಪಾರ್ಥಿವ ಶರೀರದ ಮೇಲೆ ತ್ರಿವರ್ಣ ಬಾವುಟ ಹೊದಿಸಲಾಗಿತ್ತು. ಹೈದರಾಬಾದ್‌ ಪೊಲೀಸ್ ತರಬೇತಿ ಅಕಾಡೆಮಿಯಿಂದ ಬಂದಿದ್ದಐಪಿಎಸ್‌ ದರ್ಜೆಯ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿ ಭಾವುಕರಾದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅಂತಿಮ ನಮನ ಸಲ್ಲಿಸಿದರು

ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿಗಳು, ಸಚಿವ ಯು.ಟಿ.ಖಾದರ್‌, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಸೇರಿದಂತೆ ಹಲವರು ದರ್ಶನ ಪಡೆದರು.

ಬಳಿಕ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ನಂತರ ತೋಟದಲ್ಲಿ ತಂದೆಯ ಚಿತೆಗೆ ಪುತ್ರಿ ಸಮ್ಯಾ ಹಾಗೂ ದೊಡ್ಡಪ್ಪನ ಮಗ ಬೆಂಕಿ ನೀಡಿದರು. ಅಗಲಿದ ನಾಯಕನಿಗೆ ನೆರೆದಿದ್ದವರು ಕಂಬನಿ ಮಿಡಿಸಿದರು. ದಕ್ಷ ಅಧಿಕಾರಿ ಪಂಚಭೂತಗಳಲ್ಲಿ ಲೀನರಾದರು.

ಮಧುಕರ ಶೆಟ್ಟಿ ಪತ್ನಿ ಸುವರ್ಣಾ, ಸಹೋದರರಾದ ಮುರಳೀಧರ ಶೆಟ್ಟಿ, ಸುಧಾಕರ ಶೆಟ್ಟಿ ಸೇರಿದಂತೆ ಅಪಾರ ಬಂಧುಬಳಗ ನೆರೆದಿತ್ತು.

ಚಿಕ್ಕಮಗಳೂರಿನ ಗುಪ್ತಶೆಟ್ಟಿಹಳ್ಳಿ ಗ್ರಾಮಸ್ಥರು ಮಧುಕರ ಶೆಟ್ಟಿ ಅವರಿಗೆ ಅಂತಿಮ ನಮನ ಸಲ್ಲಿಸಲು ಬಂದಿದ್ದರು

ಸೂರು ಕೊಡಿಸಿದ ಅಧಿಕಾರಿಗೆ ಕೃತಜ್ಞತೆ:ಮಧುಕರ ಶೆಟ್ಟಿ ಚಿಕ್ಕಮಗಳೂರು ಜಿಲ್ಲೆಯ ಎಸ್‌ಪಿ ಆಗಿದ್ದಾಗ ಯಲಗುಡಿಗೆ ಗ್ರಾಮದ ಬಳಿ ಭೂಮಾಲೀಕನೊಬ್ಬನ ಒತ್ತುವರಿ ತೆರವುಗೊಳಿಸಿ ಮೂಲ ನಿವಾಸಿಗಳಿಗೆ ಜಮೀನು ಬಿಡಿಸಿಕೊಟ್ಟಿದ್ದರು. ಮಧುಕರ ಶೆಟ್ಟಿ ಮೇಲಿನ ಪ್ರೀತಿಗೆ ಜನ ಊರಿನ ಹೆಸರನ್ನು ‘ಗುಪ್ತಶೆಟ್ಟಿಹಳ್ಳಿ’ ಎಂದು ನಾಮಕರಣ ಮಾಡಿದ್ದರು.

ಮಧುಕರ ಶೆಟ್ಟಿ ಅವರ ಸಾವಿನ ವಿಚಾರ ತಿಳಿದು ಕೃತಜ್ಞತೆ ಸಲ್ಲಿಸಲು ಗುಪ್ತಶೆಟ್ಟಿಹಳ್ಳಿಯಿಂದ ಗ್ರಾಮಸ್ಥರು ಬಂದಿದ್ದರು. ದಕ್ಷ ಅಧಿಕಾರಿಯ ನೆನೆದು ಕಣ್ಣೀರು ಸುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.