ಉಡುಪಿ: ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಡಿ.ಕೆ.ಶಿವಕುಮಾರ್ ಮೊದಲ ಉಡುಪಿ ಭೇಟಿ ಸಂದರ್ಭ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಗೈರು ಎದ್ದು ಕಾಣುತ್ತಿತ್ತು. ಸಮಾವೇಶ ಸ್ಥಳದಲ್ಲಿ ಕೆಲವು ಮುಖಂಡರು ಹಾಗೂ ಕಾರ್ಯರ್ತರು ಮೌನ ಪ್ರತಿಭಟನೆ ನಡೆಸುವ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತಿಳಿಸಲು ಸಿದ್ಧತೆ ನಡೆಸಿದ್ದರು. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಡಿ.ಕೆ.ಶಿವಕುಮಾರ್ ಸಮಾವೇಶದಲ್ಲಿ ಮುಖಂಡರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
‘ಅಧಿಕಾರ ಎಲ್ಲರಿಗೂ ಸಿಗುತ್ತದೆ. ಅದಕ್ಕಿಂತ ಮುಖ್ಯವಾಗಿ ಶಿಸ್ತು ಮುಖ್ಯ. ಜಿಲ್ಲೆಯಲ್ಲಿ ಒಬ್ಬರೂ ಕಾಂಗ್ರೆಸ್ ಶಾಸಕರಿಲ್ಲ. ತ್ಯಾಗ, ಶ್ರಮ ಇಲ್ಲದಿದ್ದರೆ ಅಲ್ಲಿ ಬೆಲೆ ಇರುವುದಿಲ್ಲ. ನನ್ನಿಂದಲೇ ಪಕ್ಷ ಎಂದು ತಿಳಿದಿದ್ದರೆ ಬಿಟ್ಟುಬಿಡಿ, ಬ್ಲ್ಯಾಕ್ ಮೇಲ್ ಮಾಡಬಹುದು ಎಂಬ ಭ್ರಮೆಯೂ ಬೇಡ. ಪಕ್ಷ ಬಿಟ್ಟು ಹೋಗುವವರಿದ್ದರೆ ಗೌರವಯುತವಾಗಿ ಕಳಿಸಿಕೊಡೋಣ’ ಎಂದು ಪರೋಕ್ಷವಾಗಿ ಚಾಟಿ ಬೀಸಿದರು.
‘ಕಾಂಗ್ರೆಸ್ ಪಕ್ಷದಲ್ಲಿ ಇರುವುದು ಸೌಭಾಗ್ಯ. ಚಾಡಿ ಹೇಳುವುದು ಬಿಡಿ, ನಾನು ಕೇಳುವುದಿಲ್ಲ. ಭಿನ್ನಾಭಿಪ್ರಾಯಗಳು ಸಾಮಾನ್ಯ ಆದರೆ, ಎಲ್ಲವೂ ಮನೆಯ ವಾತಾವರಣದಲ್ಲಿರಬೇಕು’ ಎಂದು ಡಿಕೆಶಿ ಕಿವಿಮಾತು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.