ಉಡುಪಿ: ಹೂಡೆಯ ಖದೀಮಿ ಜಾಮೀಯಾ ಮಸೀದಿ ಬಳಿ ಅಕ್ರಮವಾಗಿ ಮರಳು ತೆಗೆಯುತ್ತಿರುವ ದೂರಿನ ಮೇರೆಗೆ ಸ್ಥಳಕ್ಕೆ ಪರಿಶೀಲನೆಗೆ ತೆರಳಿದ ಸಂದರ್ಭ 10ರಿಂದ 12 ಜನರ ಗುಂಪು ಮಲ್ಪೆ ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ದಾಳಿಯಲ್ಲಿ ಪಿಎಸ್ಐ ವಾಹನದ ಎಡಭಾಗ ಜಖಂಗೊಂಡಿದೆ. ಹಲ್ಲೆಮಾಡಿದವರು ತಪ್ಪಿಸಿಕೊಂಡು ಪರಾರಿಯಾಗಿ, ಬಳಿಕ ಮಸೀದಿಯ ಹತ್ತಿರ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ, ಸಾರ್ವಜನಿಕರ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ.
ಅಕ್ರಮ ಕೂಟ ಸೇರಿ ಪೊಲೀಸರ ಹಾಗೂ ಸಾರ್ವಜನಿಕರ ಮೇಲೆ ಕಲ್ಲು ತೂರಾಟ ಮಾಡಿ ಹಲ್ಲೆ ಮಾಡಿದ ಆರೋಪ ಹಾಗೂ ಅಕ್ರಮ ಮರಳು ಗಣಿಗಾರಿಕೆ ತಡೆಗೆ ಸ್ಥಳ ಪರಿಶೀಲನೆಗೆ ಹೋಗಿದ್ದ ವೇಳೆ ಕಲ್ಲು ತೂರಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಆರೋಪಿಗಳಾದ ಇರ್ಷಾದ್, ಅಹಾದ್, ಅಲ್ಫಾಜ್, ಶಾಹಿಲ್, ಇರ್ಫಾನ್, ಇದಾಯತ್ ಹಾಗೂ ಇತರೆ ನಾಲ್ವರ ವಿರುದ್ಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.