ಉಡುಪಿ: ವಿಶ್ವ ಕಾರ್ಮಿಕರ ದಿನದ ಅಂಗವಾಗಿ ಭಾನುವಾರ ಉಡುಪಿಯಲ್ಲಿ ಜೆಸಿಟಿಯು ನೇತೃತ್ವದಲ್ಲಿ ಕಾರ್ಮಿಕರು ಸೌಹಾರ್ದತೆಯ ಮೇ ದಿನಾಚರಣೆ ಅಂಗವಾಗಿ ಮೆರವಣಿಗೆ ನಡೆಸಿದರು.
ಉಡುಪಿಯ ಸಿಂಡಿಕೇಟ್ ಟವರ್ ಬಳಿಯಿಂದ ಮೆರವಣಿಗೆ ಹೊರಟು ಜೋಡುಕಟ್ಟೆ ಮಾರ್ಗವಾಗಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಸಾರ್ವಜನಿಕ ಸಭೆ ನಡೆಸಲಾಯಿತು.
ರಷ್ಯಾ ಉಕ್ರೇನ್ ನಡುವಿನ ಯುದ್ಧ ಬಂಡವಾಳಶಾಹಿಗಳಿಗಳ ಪರವಾಗಿ ನಡೆಸಲಾಗುತ್ತದೆ. ನೂರಾರು ಸೈನಿಕರು, ಸಾವಿರಾರು ಕಾರ್ಮಿಕರು, ಅಮಾಯಕ ನಾಗರಿಕರು ಯುದ್ಧದಲ್ಲಿ ಬಲಿಯಾಗುತ್ತಿದ್ದಾರೆ. ಈಚೆಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಬಂಡವಾಳಶಾಯಿಗಳೆಲ್ಲ ಒಂದಾಗುವಂತೆ ಕರೆ ನೀಡಿದ್ದಾರೆ. ಕಾರ್ಮಿಕರನ್ನು ಹಿಡಿತದಲ್ಲಿಟ್ಟುಕೊಳ್ಳಲು ಸರ್ಕಾರವೇ ಬಂಡವಾಶ ಶಾಯಿಗಳಿಗೆ ಆಹ್ವಾನ ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕಾರ್ಮಿಕರ ದಿನಾಚರಣೆಯಂದು ಕಾರ್ಮಿಕರೆಲ್ಲ ಒಟ್ಟಾಗಿ ಬೆಲೆ ಏರಿಕೆ ಹಾಗೂ ಜನವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡುವ ಸಂಕಲ್ಪ ಮಾಡಬೇಕಿದೆ. ದೇಶದ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ನೀಡಿರುವ ಎಲ್ಐಸಿ ಹಾಗೂ ಇತರ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರ ಖಂಡನೀಯ ಎಂದರು.
ಎಲ್ಐಸಿಯಲ್ಲಿರುವ 39 ಲಕ್ಷ ಕೋಟಿ ಆಸ್ತಿಯ ಮೌಲ್ಯವನ್ನು ತಗ್ಗಿಸಿ ಹಂತ ಹಂತವಾಗಿ ಮಾರಾಟ ಮಾಡುವ ಪ್ರಯತ್ನಗಳು ನಡೆಸುತ್ತಿದ್ದು, ಎಲ್ಐಸಿ ಉಳಿವಿಗೆ ಸಂಘಟಿತ ಹೋರಾಟ ಅಗತ್ಯ ಎಂದರು.
ಜೆಸಿಟಿಯುನ ಉಡುಪಿ ಜಿಲ್ಲಾ ಸಂಚಾಲಕ ಕೆ ಶಂಕರ್, ವಿಮಾ ನೌಕರರ ಸಂಘದ ಕುಂದರ್, ಡೇರಿಕ್ ರೆಬೆಲ್ಲೊ, ಉಮೇಶ್, ಎ.ಬಿ.ರಮೇಶ್, ವಿದ್ಯಾನಾಯಕ್, ಸಂಜೀವ, ಶಶಿಕಲಾ, ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ, ಶಶಿಧರ ಗೋಲ್ಲ, ಶೇಖರ್ ಬಂಗೇರ, ವಾಮನ ಪೂಜಾರಿ, ಉಮೇಶ್ ಕುಂದರ್, ನಳಿನಿ, ಭಾರತಿ, ಲಲಿತ ಸಿಐಟಿಯು ಉಡುಪಿ ತಾಲ್ಲೂಕು ಕಾರ್ಯದರ್ಶಿ ಕವಿರಾಜ್, ಮೋಹನ್, ಸರೋಜ, ಅಧ್ಯಕ್ಷರಾದ ರಮ ಕಾರ್ಕಡ ಪ್ರತಿಭಟನೆಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.