ಲೋಲಾಕ್ಷ
ಉಡುಪಿ: ರಾಜ್ಯಕ್ಕೆ ರಾಷ್ಟ್ರಪತಿಗಳಿಂದ ಅಧಿಸೂಚಿತ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇಲ್ಲದ ‘ಮೇರ’ ಮತ್ತು ‘ಮನ್ಸ’ ಹೆಸರಿನ ಜಾತಿಗಳನ್ನು ಒಳ ಮೀಸಲಾತಿ ಕುರಿತ ಸಮೀಕ್ಷೆಯಲ್ಲಿ ಆದಿದ್ರಾವಿಡ ಪಟ್ಟಿಯಲ್ಲಿ ಸೇರಿಸಲು ಅವಕಾಶ ಕಲ್ಪಿಸಲಾಗಿದೆ ಎಂದಿರುವ ಉಡುಪಿ ಜಿಲ್ಲಾಧಿಕಾರಿ ಅವರ ನಡೆ ಸಂವಿಧಾನ ವಿರೋಧಿ ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಮೇರ’ ಮತ್ತು ‘ಮನ್ಸ’ ಜಾತಿಯಲ್ಲಿ ಗೊಂದಲವಿದೆ. ಈ ಜಾತಿಯನ್ನು ಆದಿದ್ರಾವಿಡ ಪಟ್ಟಿಯಲ್ಲಿ ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಹೇಳಿರುವುದು ಸರಿಯಲ್ಲ ಎಂದರು.
ರಾಜ್ಯಕ್ಕೆ ಅಧಿಸೂಚಿತ ಪರಿಶಿಷ್ಟ ಜಾತಿಗಳ (101 ಜಾತಿಗಳು ಮಾತ್ರ) ಪಟ್ಟಿಯಲ್ಲಿ ಇಲ್ಲದ ಈ ಎರಡು ಜಾತಿಗಳನ್ನು ಆದಿದ್ರಾವಿಡ ಪಟ್ಟಿಯಲ್ಲಿ ಸೇರಿಸುವುದು ಸಂವಿಧಾನ ವಿರೋಧಿ ಎಂದರು.
ಮಹಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್, ಮೊಗೇರ ಸಂಘದ ಅಧ್ಯಕ್ಷ ಸೀತಾರಾಮ್ ಕೊಂಚಾಡಿ, ರಾಜ್ಯ ಆದಿದ್ರಾವಿಡ ಸಮಾಜದ ರಾಜ್ಯ ಘಟಕ ಅಧ್ಯಕ್ಷ ಗಣೇಶ್ ಪ್ರಸಾದ್, ರಾಜ್ಯ ಮುಖಂಡ ಅನಿಲ್ ಕಂಕನಾಡಿ, ಉಡುಪಿಯ ಮುಂಡಾಲ ಸಮಾಜದ ಮುಖಂಡ ಬಿ.ಕೆ. ರಾಜು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.