ADVERTISEMENT

ರಾಜ್ಯದಲ್ಲೇ ಮಾದರಿ ಲೇಔಟ್ ನಿರ್ಮಾಣ

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ರಾಘವೇಂದ್ರ ಕಿಣಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 12:01 IST
Last Updated 29 ಜೂನ್ 2020, 12:01 IST
ಸೋಮವಾರ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಾಘವೇಂದ್ರ ಕಿಣಿ ಅವರಿಗೆ  ಜಿಲ್ಲಾಧಿಕಾರಿ ಜಿ.ಜಗದೀಶ್‌ ಶುಭ ಹಾರೈಸಿದರು.
ಸೋಮವಾರ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಾಘವೇಂದ್ರ ಕಿಣಿ ಅವರಿಗೆ  ಜಿಲ್ಲಾಧಿಕಾರಿ ಜಿ.ಜಗದೀಶ್‌ ಶುಭ ಹಾರೈಸಿದರು.   

ಉಡುಪಿ: ನಗರಾಭಿವೃದ್ದಿ ಪ್ರಾಧಿಕಾರದಿಂದ ಉಡುಪಿಯಲ್ಲಿ ರಾಜ್ಯದಲ್ಲೇ ಮಾದರಿಯಾದ ವ್ಯವಸ್ಥಿತ ಬಡಾವಣೆ ನಿರ್ಮಾಣ ಮಾಡುವುದಾಗಿ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷ ರಾಘವೇಂದ್ರ ಕಿಣಿ ಭರವಸೆ ನೀಡಿದರು.

ಸೋಮವಾರ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು,ಪ್ರಾಧಿಕಾರದಿಂದ ಜಾಗ ಖರೀದಿಸಿ ಸುಸಜ್ಜಿತ ಬಡಾವಣೆ ನಿರ್ಮಾಣ ಗುರಿ ಹೊಂದಲಾಗಿದೆ. ಪ್ರಾಧಿಕಾರದ ಕಚೇರಿಯನ್ನು ಮತ್ತಷ್ಟು ಜನಸ್ನೇಹಿಯಾಗಿ ರೂಪಿಸುವುದು ಹಾಗೂ ಸಾರ್ವಜನಿಕರಿಗೆ ಶೀಘ್ರ ಸೇವೆ ದೊರೆಯುವಂತಾಗಲು ಆದ್ಯತೆ ನೀಡುವುದಾಗಿ ಹೇಳಿದರು.

ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಚೇರಿಯಲ್ಲಿ ಸಾರ್ವಜನಿಕರು ಭೇಟಿ ಮಾಡಬಹುದು. ಸದ್ಯ ಕೊರೊನಾ ಸೋಂಕು ಹೆಚ್ಚಾಗಿರುವುದರಿಂದ ತುರ್ತು ಕೆಲಸಗಳಿದ್ದರೆ ಮಾತ್ರ ಕಚೇರಿಗೆ ಬರಬೇಕು. ನೇರ ಭೇಟಿಯ ಬದಲುಪ್ರಾಧಿಕಾರದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅಥವಾ ಇಮೇಲ್ ಮೂಲಕವೂ ದಾಖಲಾತಿಗಳನ್ನು ಕಳುಹಿಸಿ ಕೆಲಸ ಮಾಡಿಸಿಕೊಳ್ಳಬಹುದು ಎಂದರು.

ADVERTISEMENT

ಶಾಸಕ ರಘುಪತಿ ಭಟ್ ಮಾತನಾಡಿ, ‘ಉಡುಪಿ ನಗರದ ಅಭಿವೃದ್ದಿಯ ಮಾಸ್ಟರ್ ಪ್ಲಾನ್ ಇದುವರೆಗೂ ಅನುಮೋದನೆಯಾಗಿಲ್ಲ. ನೂತನ ಅಧ್ಯಕ್ಷರು ಹಾಗೂ ಪ್ರಾಧಿಕಾರದ ತಂಡ ಇದಕ್ಕೆ ಆದ್ಯತೆ ನೀಡಬೇಕು. ಪ್ರಾಧಿಕಾರದಿಂದ ಜಾಗ ಖರೀದಿಸಿ, ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ವ್ಯವಸ್ಥಿತವಾದ ವಸತಿ ಸೌಲಭ್ಯ ಒದಗಿಸಬೇಕು. ಪ್ರಸ್ತುತ ಝೋನ್‌ ಬದಲಾವಣೆ ಸಮಸ್ಯೆ ಇದ್ದು ಅದನ್ನು ಸರಳೀಕರಣಗೊಳಿಸಬೇಕು ಎಂದರು.

ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಾಧಿಕಾರದ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ‘ಜಿಲ್ಲೆಯಲ್ಲಿ ಪ್ರಸ್ತುತ ಕಟ್ಟಡ ನಿರ್ಮಾಣ ಚಟುವಟಿಕೆಗಳು ಚುರುಕಾಗಿದ್ದು, ಪ್ರಾಧಿಕಾರದ ಜವಾಬ್ದಾರಿ ಹೆಚ್ಚಾಗಿದೆ. ಹೊಸ ಬಡಾವಣೆಗಳಿಗೆ ಅನುಮತಿ ನೀಡುವಾಗ ಸರ್ಕಾರದ ನಿಯಮಗಳಂತೆ ಉದ್ಯಾನ ಹಾಗೂ ರಸ್ತೆಗಳಿಗೆ ಅಗತ್ಯ ಜಾಗ ಮೀಸಲಿಡುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ವ್ಯವಸ್ಥಿತ ಲೇಔಟ್‌ಗಳ ನಿರ್ಮಾಣಕ್ಕೆ ಅನುಮತಿ ನೀಡುವ ಮೂಲಕ ವಿವಾದಗಳು ತಲೆದೋರದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರದಲ್ಲಿ ಕೆರೆಗಳ ಅಭಿವೃದ್ಧಿಗೆ ₹ 5 ಕೋಟಿ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಶೀಘ್ರ ಅನುಮತಿ ದೊರೆಯುವ ನಿರೀಕ್ಷೆ ಇದೆ. ಪ್ರಾಧಿಕಾರದಲ್ಲಿ ಹಣದ ಕೊರತೆ ಇಲ್ಲ, ನಗರದಲ್ಲಿ ಕೆರೆಗಳ ಅಭಿವೃಧ್ದಿ ಮತ್ತು ಉದ್ಯಾನಗಳ ನಿರ್ಮಾಣದ ಜೊತೆಗೆ ವಾಕಿಂಗ್ ಪಾಥ್‌ಗಳು ಹಾಗೂ ಓಪನ್ ಜಿಮ್‌ಗಳ ಸ್ಥಾಪನೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಕುಂದಾಪುರ ಉಪ ವಿಬಾಗಾಧಿಕಾರಿ ರಾಜು, ಪ್ರಾಧಿಕಾರದ ನೂತನ ಸದಸ್ಯರಾದ ದಿನಕರ ಪೂಜಾರಿ, ಕಿಶೋರ್ ಕುಮಾರ್, ಪ್ರವೀಣ್ ಶೆಟ್ಟಿ, ಸುಮಾ ನಾಯಕ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.