ಉಡುಪಿ: ಭಾರತ ಹಿಂದೂ ರಾಷ್ಟ್ರವಾಗಿ ಉಳಿಯಲು ಹಿಂದೂಗಳು ಬಹುಸಂಖ್ಯಾತರಾಗಿ ಉಳಿಯಬೇಕು. ಹಿಂದೂಗಳ ಬಹುಸಂಖ್ಯಾತರಾಗಿ ಉಳಿದರೆ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಉಳಿಯುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಮಣಿಪಾಲದ ಕಂಟ್ರಿ ಇನ್ ಹೋಟೆಲ್ನಲ್ಲಿ ಶನಿವಾರ ಬಿಜೆಪಿ ಯುವ ಮೋರ್ಚಾ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ‘ಸುಶಾಸನ’ ಕಾರ್ಯಕ್ರಮದಲ್ಲಿ ಮಾತನಾಡಿ, ಮತಾಂತರ ನಿಂತರೆ ಸಾಲದು, ಹಿಂದೆ ಮತಾಂತರವಾದವರು ಮರಳಿ ಹಿಂದೂ ಧರ್ಮಕ್ಕೆ ಮರಳಬೇಕು. ಮಠಮಂದಿರಗಳು ಮತಾಂತರವಾದವರನ್ನು ಮರಳಿ ಧರ್ಮಕ್ಕೆ ತರುವ ಕೆಲಸ ಮಾಡಬೇಕು ಎಂದರು.
ಸ್ವಾತಂತ್ರ್ಯ ನಂತರ ಸುಶಾಸನದ ಅರ್ಥ ತಿಳಿಸಿಕೊಟ್ಟಿದ್ದು ವಾಜಪೇಯಿಯಾಗಿದ್ದು ಅವರ ಜಯಂತಿಯನ್ನು ಪ್ರಧಾನಿ ಮೋದಿ ಸುಶಾಸನ ದಿನವನ್ನಾಗಿ ಘೋಷಿಸಿದ್ದಾರೆ. ಮೋದಿ ಜನರನ್ನು ಪ್ರೌಢರನ್ನಾಗಿಸಿ, ವರ್ತನೆಯಲ್ಲಿ ಬದಲಾವಣೆ ತಂದಿದ್ದಾರೆ. ಅದರ ಫಲವಾಗಿ ಕಳೆದ ಎರಡು ಬಾರಿಯ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಾಗಿದೆ ಎಂದರು.
ಕಳೆದ 70 ವರ್ಷಗಳಲ್ಲಿ ದೇಶ ಎದುರಿಸಿದ ಎಲ್ಲ ಸಮಸ್ಯೆಗಳಿಗೆ ಸಮಾಜವಾದ ಹಾಗೂ ಜಾತ್ಯಾತೀತವಾದವೇ ಕಾರಣ. ಸಮಾಜವಾದ ದೇಶವನ್ನು ಬಡತನಕ್ಕೆ ದೂಡಿದರೆ, ಜಾತ್ಯಾತೀತವಾದ ಸಾಂಸ್ಕೃತಿಕವಾಗಿ ಬಡತನಕ್ಕೆ ದೂಡಿತು ಎಂದು ತೇಜಸ್ವಿಸೂರ್ಯ ಹೇಳಿದರು.
ಸಂವಾದದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ತೇಜಸ್ವಿ ಸೂರ್ಯ ‘ಪ್ರಧಾನಿ ಮೋದಿ ಒನ್ ನೇಷನ್-ಒನ್ ಎಲೆಕ್ಷನ್ ಜಾರಿಗೊಳಿಸುವ ಚಿಂತನೆ ಹೊಂದಿದ್ದು, ಇದರಿಂದ ಚುನಾವಣೆಯ ನೀತಿಸಂಹಿತೆ ಹೆಸರಿನಲ್ಲಿ ಅಭಿವೃದ್ಧಿ ಕುಂಠಿತವಾಗುವುದು ತಪ್ಪುತ್ತದೆ. ಜಾತಿ ಆಧಾರಿತ ತಾರತಮ್ಯ ಇರುವರೆಗೆ ಜಾತಿ ಆಧಾರಿತ ಮೀಸಲಾತಿ ಅಗತ್ಯ. ಮೀಸಲಾತಿಯಿಂದ ಹೊರಗಿರುವ ಜಾತಿಗಳಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10 ಮೀಸಲಾತಿ ನೀಡಲಾಗುತ್ತಿದೆ’ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಯುವಮೋರ್ಚಾ ಅಧ್ಯಕ್ಷ ಡಾ.ಸಂದೀಪ್, ಕಾರ್ಯದರ್ಶಿ ಅಜಿತ್ ಹೆಗಡೆ, ಶಾಸಕ ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರ ಅಧ್ಯಕ್ಷ ಮಹೇಶ್ ಠಾಕೂರ್, ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಮುಖಂಡ ರೋಶನ್ ಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.