ಉಡುಪಿ: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೊಳಪಡುವ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಏ.26 ರಂದು ಸಾಮೂಹಿಕ ವಿವಾಹಗಳು ನಡೆಯಲಿವೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ, ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಉತ್ತಮ ಆದಾಯವಿರುವ 110 ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ. ವಿವಾಹ ನೋಂದಣಿಗೆ ಎಪಿಎಲ್, ಬಿಪಿಎಲ್ ಮಾನದಂಡ ಇಲ್ಲ.
ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ನೋಂದಣಿ ಮಾಡಿಸಿಕೊಂಡ ವರನಿಗೆ ಪಂಚೆ, ಶಲ್ಯ ಖರೀದಿ ಮತ್ತು ಇತರ ಖರ್ಚಿಗೆಂದು ₹ 5000, ವಧುವಿಗೆ ಧಾರೆ ಸೀರೆ ಖರೀದಿ ಮತ್ತು ಇತರ ಖರ್ಚಿಗೆಂದು ₹ 10,000, ಚಿನ್ನ ತಾಳಿ ಖರೀದಿಗೆ ₹ 40,000 ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಈ ಮೊತ್ತವನ್ನು ವಿವಾಹದ ದಿನವೇ ವಧು–ವರರ ಬ್ಯಾಂಕ್ ಖಾತೆಗೆ ಆರ್ಟಿಜಿಎಸ್ ಮೂಲಕ ಜಮೆ ಮಾಡಲಾಗುವುದು. ಹೆಸರು ನೋಂದಣಿಗೆ ಮಾರ್ಚ್ 27 ಕೊನೆಯ ದಿನ. ಏ.1ರಂದು ನೋಂದಾಯಿತ ವಧು–ವರರ ವಿವರಗಳನ್ನು ದೇವಾಲಯಗಳಲ್ಲಿ ಪ್ರಕಟಿಸಲಾವುದು. ಏ.6ರವರೆಗೆ ಪಟ್ಟಿಗೆ ಆಕ್ಷೇಪಣೆಗೆ ಅವಕಾಶ ಇರಲಿದೆ. 11ರಂದು ಅಂತಿಮ ಪಟ್ಟಿ ಪ್ರಕಟವಾಗಲಿದೆ.
ಸಾಮೂಹಿಕ ವಿವಾಹದ ಬಗ್ಗೆ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಶೀಘ್ರ ಸಂಖ್ಯೆಯನ್ನು ತಿಳಿಸಲಾಗುವುದು ಎಂದು ಕೋಟ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.