ಉಡುಪಿ: ಅಜ್ಜರಕಾಡಿನ ಡಯಾನಾ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಜಿ.ಜಗದೀಶ್ ಕೆಎಸ್ಐಸಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು,ಡಿ.13ರವರೆಗೆ ಪ್ರದರ್ಶನ ಹಾಗೂ ಮಾರಾಟ ನಡೆಯಲಿದ್ದು, ಸಾರ್ವಜನಿಕರಿಗೆ ಶೇ 25ರವರೆಗೆ ಡಿಸ್ಕೌಂಟ್ ಲಭ್ಯವಿದೆ. ಪಾರಂಪರಿಕ ಉತ್ಪನ್ನವಾದ ಮೈಸೂರು ಸಿಲ್ಕ್ ಸೀರೆಗಳ ಖರೀದಿಗೆ ಇದು ಉತ್ತಮ ಅವಕಾಶ ಎಂದರು.
ಕಂಪೆನಿಯ ಮಾರುಕಟ್ಟೆ ವಿಭಾಗದ ಜನರಲ್ ಮ್ಯಾನೇಜರ್ ಭಾನುಪ್ರಕಾಶ್ ಮಾತನಾಡಿ, 1,000ಕ್ಕೂ ಹೆಚ್ಚು ಸೀರೆಗಳ ಸಂಗ್ರಹವಿದ್ದು, ₹ 6,000 ಬೆಲೆಯಿಂದ ₹ 1.25 ಲಕ್ಷ ಮೌಲ್ಯದ ಸೀರೆಗಳು ಮಾರಾಟಕ್ಕೆ ಲಭ್ಯವಿದೆ. ಸಾಂಪ್ರದಾಯಿಕ ಮೈಸೂರು ಸಿಲ್ಕ್ ಸೀರೆಗಳ ಜತೆಗೆ, ಕ್ರೇಪ್ ಡಿ ಚೈನ್, ಜಾರ್ಜೆಟ್, ಸಾದ ಮುದ್ರಿತ ಸೀರೆಗಳು, ಟೈ, ಸ್ಕಾರ್ಫ್ ಉತ್ಪನ್ನ ಹಾಗೂ ವಿವಾಹ ಸಂಗ್ರಹ ಸೀರೆಗಳು ಲಭ್ಯವಿದೆ ಎಂದು ತಿಳಿಸಿದರು.
ಹಳೆ ಮೈಸೂರು ಪ್ರಾಂತ್ಯದಲ್ಲಿ ದೊರೆಯುವ ಪ್ರಾಕೃತಿಕ ರೇಷ್ಮೆ ಗೂಡುಗಳನ್ನು ಬಳಸಿ ಸೀರೆಗಳನ್ನು ನೇಯ್ಯಲಾಗಿದೆ. ಮೈಸೂರು ರೇಷ್ಮೆ ಸೀರೆಗಳು ಭೌಗೋಳಿಕ ಗುರುತಿನ ನೋಂದಣಿ ಮಾನ್ಯತೆ ಹಾಗೂ ಐಎಸ್ಒ 9001–2015, ಇಎಂಎಸ್ 14001–2015 ದೃಢೀಕರಣ ಹೊಂದಿದೆ. ಶೇ 0.65ರಷ್ಟು ಚಿನ್ನ, ಶೇ 65ರಷ್ಟು ಬೆಳ್ಳಿಯ ಜರಿಗಳನ್ನು ಬಳಸಿ ಸಾಂಪ್ರದಾಯಿಕ ಹಾಗೂ ಆಧುನಿಕತೆಗೆ ತಕ್ಕಂತೆ ಸೀರೆಗಳನ್ನು ತಯಾರಿಸಲಾಗಿದೆ ಎಂದರು.
ಕೆಎಸ್ಐಸಿ ನಿಗಮಕ್ಕೆ 2016–17, 18–19ನೇ ಸಾಲಿನ ಮುಖ್ಯಮಂತ್ರಿಗಳ ವಾರ್ಷಿಕ ರತ್ನ ಪ್ರಶಸ್ತಿ ದೊರೆತಿದೆ. 2012ರಲ್ಲಿ ಶತಮಾನ ಪೂರೈಸಿದ ಸರ್ಕಾರದ ಮೊದಲ ಉದ್ದಿಮೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ ಎಂದು ಹೇಳಿದರು.
ಪ್ರದರ್ಶನದ ಉಸ್ತುವಾರಿ ಶ್ರೀನಿವಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.