ಉಡುಪಿ: ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳ ಆಶ್ರಯದಲ್ಲಿ ಬುಧವಾರ ನಶಾ ಮುಕ್ತ ಭಾರತ ಅಭಿಯಾನ ಹಾಗೂ ಎನ್.ಎಸ್.ಎಸ್. ಸ್ವಯಂ ಸೇವಕರಿಗೆ ಕಾನೂನು ಜಾಗೃತಿ ಕಾರ್ಯಗಾರ ನಡೆಯಿತು.
ಜಿಲ್ಲಾ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೋಗ ಬಂದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ತಡೆಗಟ್ಟುವಿಕೆ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವ್ಯಸನಗಳಿಗೆ ದಾಸರಾಗದೆ ಪುಸ್ತಕಗಳನ್ನು ಓದುವ ಮೂಲಕ ಉತ್ತಮ ಚಿಂತನೆ ಹಾಗೂ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಹದಿ ಹರೆಯದವರು ವ್ಯಸನಕ್ಕೆ ಬಲಿಯಾಗುತ್ತಿರುವುದು ಹೆಚ್ಚು ಆತಂಕಕಾರಿ. ಗೆಳೆಯರ ಒತ್ತಡಕ್ಕೊ, ಆಕರ್ಷಣೆಗೋ ಸಿಲುಕಿ ಮಾದಕ ವ್ಯಸನದ ದಾಸರಾಗುತ್ತಿದ್ದಾರೆ. ವಿದ್ಯಾರ್ಥಿಗಳು ವ್ಯಸನಗಳಿಂದ ಹೊರಬರಬೇಕು ಎಂದರು.
ನಶಾ ಮುಕ್ತ ಭಾರತದ ಪರಿಕಲ್ಪನೆ ಕೇವಲ ಅಭಿಯಾನ ಮತ್ತು ಕಾರ್ಯಾಗಾರಗಳಿಂದ ಸಾಧ್ಯವಿಲ್ಲ. ಕಾನೂನಿನ ಅರಿವು, ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಅಳವಡಿಕೆಯಾಗಿ ಅಧ್ಯಯನ ವಿಷಯವಾಗಬೇಕು.
ಧ್ಯಾನ, ಯೋಗ ಮತ್ತು ಕ್ರೀಡಾ ಚಟುವಟಿಕೆಗಳಿಂದ ಮಾದಕ ವ್ಯಸನಗಳಿಂದ ದೂರವಿರಲು ಸಾದ್ಯ ಎಂದು ಹಿರಿಯ ಸಿವಿಲ್ ನ್ಯಾಯಧೀಶೆಶರ್ಮಿಳಾ ಎಸ್. ಅಭಿಪ್ರಾಯಪಟ್ಟರ.
ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಮಾತನಾಡಿ, ಆರೋಗ್ಯವಂತ ಭಾರತ ನಿರ್ಮಾಣಕ್ಕೆ ಆರೋಗ್ಯವಂತ ಯುವಜನತೆಯ ಕೊಡುಗೆ ಮುಖ್ಯ. ಯುವಜನತೆ ಆರೋಗ್ಯವಂತ ಚಿಂತನೆಗಳನ್ನು ರೂಢಿಸಿಕೊಂಡು ಸ್ವಸ್ಥ ಸಮಾಜ ನಿರ್ಮಾಣದ ಜವಾಬ್ದಾರಿ ನಿಭಾಯಿಸಬೇಕು ಎಂದು ಸಲಹೆ ನೀಡಿದರು.
ಮಣಿಪಾಲ ಪಿಎಸ್ಯ ನಿಧಿ ಎನ್.ಎಸ್.ಎಸ್. ಸ್ವಯಂ ಸೇವಕರಿಗೆ ನಶಾ ಮುಕ್ತ ಭಾರತ ಅಭಿಯಾನ ಮತ್ತು ಜಾಗೃತಿ ಕಾರ್ಯಗಾರ ನಡೆಸಿಕೊಟ್ಟರು. ಜಿಲ್ಲೆಯ ಹಲವು ಕಾಲೇಜಿನ ಎನ್.ಎಸ್.ಎಸ್. ಸ್ವಯಂ ಸೇವಕರು ಪಾಲ್ಗೊಂಡಿದ್ದರು.
ಐಕ್ಯುಎಸಿ ಸಂಚಾಲಕರಾದ ಕೆ.ಜಿ.ಸೋಜನ್, ಮಾದಕ ದ್ರವ್ಯ ವ್ಯಸನ ತಡೆ ಸಮಿತಿ ಸಂಚಾಲಕಿ ಶುಭಾ ಬಿ.ಎಸ್, ಎನ್ಎಸ್ಎಸ್ ಸಂಚಾಲಕರಾದ ಡಾ.ರಾಜೇಂದ್ರ ಕೆ. ಮತ್ತು ರಮ್ಯಾ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವಾಣಿ ಆರ್.ಬಲ್ಲಾಳ್ ಸ್ವಾಗತಿಸಿದರು. ಗೌರಿ ಕಾರ್ಯಕ್ರಮ ನಿರೂಪಿಸಿದರು. ರಿತಿಕಾ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.