ADVERTISEMENT

ಕೋವಿಡ್ ಬಳಿಕ ದೇಶದ ಆರ್ಥಿಕ ವ್ಯವಸ್ಥೆ ಚೇತರಿಕೆ: ನಿರ್ಮಲಾ ಸೀತಾರಾಮನ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 16:28 IST
Last Updated 28 ಡಿಸೆಂಬರ್ 2021, 16:28 IST
ನಿರ್ಮಲಾ ಸೀತಾರಾಮನ್‌, ಕೇಂದ್ರ ಹಣಕಾಸು ಸಚಿವೆ
ನಿರ್ಮಲಾ ಸೀತಾರಾಮನ್‌, ಕೇಂದ್ರ ಹಣಕಾಸು ಸಚಿವೆ   

ಉಡುಪಿ: ಕೋವಿಡ್‌ನಿಂದ ಜರ್ಜರಿತವಾಗಿದ್ದ ದೇಶದ ಆರ್ಥಿಕ ವ್ಯವಸ್ಥೆ ಚೇತರಿಕೆ ಕಾಣುತ್ತಿದೆ. ಸರ್ಕಾರದ ದಿಟ್ಟ ಕ್ರಮಗಳಿಂದ ದೇಶದ ಅರ್ಥ ವ್ಯವಸ್ಥೆ ಹಳಿಗೆ ಬರುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್‌ ಕಮ್ಯುನಿಕೇಷನ್‌ ಮಂಗಳವಾರ ಎಂ.ವಿ.ಕಾಮತ್ ಶತಮಾನೋತ್ಸವ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೆಬಿನಾರ್‌ನಲ್ಲಿ ಭಾಗವಹಿಸಿ ಮಾತನಾಡಿದರು.

2020ರಲ್ಲಿ ಕೋವಿಡ್‌ ಸೇರಿದಂತೆ ಹಲವು ಪ್ರಾಕೃತಿಕ ವಿಕೋಪಗಳನ್ನು ದೇಶ ಸಮರ್ಥವಾಗಿ ಎದುರಿಸಿದೆ. ಉಚಿತ ಪಡಿತರ ಹಾಗೂ ಲಸಿಕೆ ನೀಡುವ ಮೂಲಕ ಜನರ ಜೀವ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ADVERTISEMENT

ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಂಡ ಪರಿಣಾಮ 2020ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ದೇಶದ ಆರ್ಥಿಕತೆಗೆ ಬಲವಾದ ಪೆಟ್ಟುಬಿತ್ತು. ಸದ್ಯ ಪರಿಸ್ಥಿತಿ ಸುಧಾರಿಸುತ್ತಿದ್ದು, ಸಂಕಷ್ಟದ ಸಮಯದಲ್ಲಿ ಜನರು ಸರ್ಕಾರದ ಜತೆಗೆ ನಿಂತಿದ್ದರಿಂದ ಆರ್ಥಿಕತೆ ಚೇತರಿಸಿಕೊಳ್ಳಲು ಸಾಧ್ಯವಾಯಿತು ಎಂದರು.

ಕೋವಿಡ್‌ ನಂತರ ವಿಶ್ವದಲ್ಲೇ ವೇಗವಾಗಿ ಚೇತರಿಸಿಕೊಳ್ಳುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದು ಐಎಂಎಫ್ ಹಾಗೂ ವಿಶ್ವಬ್ಯಾಂಕ್‌ ಹೇಳಿದೆ. ಹಲವು ಸ್ಟಾರ್ಟ್ಅಪ್‌ಗಳು ಆರಂಭಗೊಂಡಿವೆ. 2021ರಲ್ಲಿ ಷೇರುಮಾರುಕಟ್ಟೆಗೆ 63 ಸಂಸ್ಥೆಗಳು ಐಪಿಒ ಬಿಡುಗಡೆಮಾಡಿವೆ. ಕೃಷಿ, ಮೆಡಿಸಿನ್‌, ವಸತಿ, ಸ್ಯಾಟಲೈಟ್ ಸೇರಿದಂತೆ ಎಲ್ಲ ಕ್ಷೇತ್ರಗಳಿಂದಲೂ ಸ್ಟಾರ್ಟ್‌ಅಪ್‌ಗಳು ಆರಂಭವಾಗುತ್ತಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.