ಬ್ರಹ್ಮಾವರ: ‘ಕಲೆ, ಸಾಹಿತ್ಯಗಳು ಸನಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತವೆ. ಮೌಲ್ಯಗಳನ್ನು ಬೆಳೆಸುವ ಕಾರ್ಯಕ್ರಮ ನಡೆಸುವುದು ಅಜಪುರ ಕರ್ನಾಟಕ ಸಂಘದ ಉದ್ದೇಶ. ಎಲ್ಲರೂ ಕೈ ಜೋಡಿಸಿದಾಗ ಇಂತಹ ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತದೆ ಎಂದು ಇಲ್ಲಿನ ಅಜಪುರ ಕರ್ನಾಟಕ ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ ಹೇಳಿದರು.
ಸಂಘದ ವತಿಯಿಂದ 70ನೇ ವರ್ಷದ ನಾಡಹಬ್ಬ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪತ್ರಕರ್ತ ಕೆ.ಎಲ್.ಕುಂಡಂತಾಯ ಮಾತನಾಡಿ, ಸಾಮಾಜಿಕ ಕೆಲಸಗಳನ್ನು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದಾಗ ಮಾಡಿದ ಕೆಲಸಕ್ಕೆ ಸಾರ್ಥಕ್ಯ ಬರುತ್ತದೆ. ಇನ್ನೂ ಹೆಚ್ಚು ಕೆಲಸ ಮಾಡಲು ಪ್ರೇರಣೆಯಾಗುತ್ತದೆ ಎಂದರು.
ಜಾನಪದ ವಿದ್ವಾಂಸ ಕುಂಜೂರು ಲಕ್ಷ್ಮೀನಾರಾಯಣ ಕುಂಡಂತಾಯ ಅವರಿಗೆ ‘ಸುವರ್ಣ ನಿಧಿ ಸನ್ಮಾನ’, ಯಕ್ಷಗಾನ ಕಲಾವಿದ, ಭಾಗವತ ಸದಾಶಿವ ಅಮೀನ್ ಅವರಿಗೆ ‘ಅಜಪುರ ಯಕ್ಷ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಅಜಪುರ ಕರ್ನಾಟಕ ಸಂಘದ ಸ್ಥಾಪಕ ಸದಸ್ಯರಾಗಿ, ಕೋಶಾಧಿಕಾರಿಯಾಗಿ ಸಂಘವನ್ನು ಕಟ್ಟಿ ಬೆಳೆಸಿದ ರಾಮಕೃಷ್ಣ ಆಚಾರ್ ಅವರನ್ನು ಅಭಿನಂದಿಸಲಾಯಿತು.
ಯಕ್ಷಗಾನ ವಿಮರ್ಶಕ, ಉಪನ್ಯಾಸಕ ಉದಯ ಕುಮಾರ್ ಶೆಟ್ಟಿ, ಶೇಡಿಕೊಡ್ಲು ವಿಠಲ್ಶೆಟ್ಟಿ, ರಘುರಾಮ ಬೈಕಾಡಿ ಭಾಗವಹಿಸಿದ್ದರು. ಸಂಘದ ಕಾರ್ಯದರ್ಶಿ ಬೈಕಾಡಿ ದಿನಕರ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಆರ್.ಟಿ.ಭಟ್ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮುನ್ನ ಮಹಾತ್ಮ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರೀ ಜಯಂತಿ ಪ್ರಯುಕ್ತ ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಸದಾಶಿವ ಅಮೀನ್ ನೇತೃತ್ವದಲ್ಲಿ ನಡೂರು ಮಹಾಗಣಪತಿ ಯಕ್ಷಗಾನ ಮಂಡಳಿಯವರಿಂದ ‘ವೀರ ಬರ್ಭರೀಕ’ ಯಕ್ಷಗಾನ ಪ್ರದರ್ಶನ ನಡೆಯಿತು.
ಸಂಘ ಸಂಸ್ಥೆಗಳು ಕರೆದು ಸನ್ಮಾನಿಸಿದಾಗ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಕಲೆ ಕಲಾವಿದರು ಬೆಳಯಲು ಸಹಕಾರಿಯಾಗುತ್ತದೆ ಸ–ದಾಶಿವ ಅಮೀನ್, ಭಾಗವತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.