ಉಡುಪಿ: ಪೇಜಾವರ ಮಠದ ಯತಿಗಳಾಗಿದ್ದ ವಿಶ್ವೇಶತೀರ್ಥ ಶ್ರೀಗಳ ಪ್ರಥಮ ಆರಾಧನೆ ಡಿ.17ರಂದು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆಯಲಿದೆ. ವೃಂದಾವನ ಸನ್ನಿಧಾನದಲ್ಲಿ ಪ್ರತಿಷ್ಠೆ ಹಾಗೂ ಮಹಾ ಸಮಾರಾಧನೆ ನಡೆಯಲಿದೆ.
ವಿಶ್ವೇಶತೀರ್ಥರ ಅಪೇಕ್ಷೆಯಂತೆ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಭವ್ಯ ಶಿಲಾ ವೃಂದಾವನವನ್ನು ನಿರ್ಮಾಣ ಮಾಡಲಾಗಿತ್ತು. ಶ್ರೀಗಳ ಮೆಚ್ಚಿನ ಸ್ಥಳವಾಗಿದ್ದರಿಂದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿಯೇ ಅವರ ಪ್ರಥಮ ಆರಾಧನೆ ನಡೆಸಲು ಪೇಜಾವರ ಮಠ ನಿರ್ಧರಿಸಿದೆ.
ಮುಂಜಾನೆ ಪ್ರತಿಷ್ಠಾಕಲಶ ಸ್ಥಾಪನೆ, ಹೋಮ, ಕಲಶಾವಾಸ ಹೋಮ, ಕಲಶಾರಾಧನೆ, ಅಷ್ಟಬಂಧ ಹೋಮ, ವಿಷ್ಣುಗಾಯತ್ರಿ ಹೋಮ, ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಹಾಗೂ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರಿಂದ ನಾರಾಯಣ ಪ್ರತಿಷ್ಠೆ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆನ್ಲೈನ್ ಮೂಲಕ ಪ್ರವಚನ ಹಾಗೂ ವಿಶ್ವೇಶ ತೀರ್ಥರ ಕುರಿತ ‘ಯತಿಕುಲ ಚಕ್ರವರ್ತಿ’ ಸ್ಮರಣ ಸಂಚಿಕೆಯೂ ಬಿಡುಗಡೆಯಾಗಲಿದೆ.
ಬುಧವಾರ ಪೂರ್ವಾರಾಧನೆ ಪ್ರಯುಕ್ತ ಮಠದಲ್ಲಿ ವಿವಿಧ ಹೋಮಾದಿಗಳು ನಡೆದವು. ಕಳೆದ ವರ್ಷ ಡಿ.29ರಂದು ಪೇಜಾವರ ಶ್ರೀಗಳು ನಿಧನರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.