ಉಡುಪಿ: ಕ್ರೈಸ್ತ ಸಮುದಾಯ ಸಂಕುಚಿತ ಮನೋಭಾವದಿಂದ ಹೊರಬಂದು ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ. ಸೂಕ್ತ ರಾಜಕೀಯ ನಾಯಕತ್ವದ ಅಗತ್ಯತೆಯೂ ಇದೆ ಎಂದು ಪತ್ರಕರ್ತ ವಾಲ್ಟರ್ ನಂದಳಿಕೆ ಹೇಳಿದರು.
ಇಲ್ಲಿನ ಶೋಕ ಮಾತಾ ಇಗರ್ಜಿ ಸಭಾಂಗಣದಲ್ಲಿ ಭಾನುವಾರ ಕಥೊಲಿಕ್ ಸಭಾ ಉಡುಪಿ ಪ್ರದೇಶದ ದಶಮಾನೋತ್ಸವ ವರ್ಷಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಥೊಲಿಕ್ ಸಭಾ ವಿಶೇಷ ಸೇವೆ ಸಲ್ಲಿಸುತ್ತಿದ್ದು, ಸಮುದಾಯ ರಾಜಕೀಯವಾಗಿ ಮತ್ತಷ್ಟು ಬಲಿಷ್ಠಗೊಳ್ಳಬೇಕಾಗಿದೆ ಎಂದರು.
ಸಮುದಾಯದ ಯುವಕರು ಸರ್ಕಾರಿ ಉದ್ಯೋಗಗಳತ್ತ ಒಲವು ತೋರಿಸಬೇಕು ಎಂದು ಸಲಹೆ ನೀಡಿದರು.
ಕಥೊಲಿಕ್ ಸಭಾದ ಕೇಂದ್ರೀಯ ಸಮಿತಿಯ ವಾರ್ಷಿಕ ಸಭೆ ಅಧ್ಯಕ್ಷ ಮೇರಿ ಡಿಸೋಜ ನೇತೃತ್ವದಲ್ಲಿ ನಡೆಯಿತು.
ಕಾರ್ಯದರ್ಶಿ ಗ್ರೆಗರಿ ಪಿಕೆ ಡಿಸೋಜ,ಸಹ ಕಾರ್ಯದರ್ಶಿ ಒಲಿವಿಯಾ ಡಿಮೆಲ್ಲೊ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಜೆರಾಲ್ಡ್ ರೋಡ್ರಿಗಸ್ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.
ಮಾನಸ ಸಂಸ್ಥೆಯ ವರದಿಯನ್ನು ಅಧ್ಯಕ್ಷ ಹೆನ್ರಿ ಮಿನೇಜಸ್, ಸಶಕ್ತ ಸಮುದಾಯ ಸೇವಾ ಟ್ರಸ್ಟ್ನ ವರದಿಯನ್ನು ಕಾರ್ಯದರ್ಶಿ ಆಲಿಸ್ ರೊಡ್ರಿಗಸ್ ಮಂಡಿಸಿದರು.
ದಶಮಾನೋತ್ಸವ ವರ್ಷದ ಕಾರ್ಯ ಚಟುವಟಿಕೆಗಳ ಮುನ್ನೋಟವನ್ನು ಸಂಚಾಲಕ ಆಲ್ವಿನ್ ಕ್ವಾಡ್ರಸ್ ಮತ್ತು ಮಾನಸ ವಿಶೇಷ ಮಕ್ಕಳ ಶಾಲೆಯ ರಜತಮಹೋತ್ಸವ ವರ್ಷದ ಕಾರ್ಯಕ್ರಮಗಳ ವಿವರವನ್ನು ಸಂಚಾಲಕ ಎಲ್.ರೋಯ್ ಕಿರಣ್ ಕ್ರಾಸ್ತಾ ನೀಡಿದರು.
ಕಥೊಲಿಕ್ ಸಭಾ ಮಾಜಿ ಅಧ್ಯಕ್ಷ ಡಾ.ಜೆರಾಲ್ಡ್ ಪಿಂಟೊ ಬರೆದ ‘ಭಾರತದ ಸ್ವಾತಂತ್ರ್ಯ ಚಳವಳಿಗೆ ಕ್ರೈಸ್ತರ ಕೊಡುಗೆ’ ಕುರಿತ ಪುಸ್ತಕ ಅನಾವರಣಗೊಳಿಸಲಾಯಿತು.
ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷ ರಾಬರ್ಟ್ ಮಿನೇಜಸ್, ಉಪಾಧ್ಯಕ್ಷ ರೊನಾಲ್ಡ್ ಡಿ ಆಲ್ಮೇಡಾ, ಸಶಕ್ತ ಸಮುದಾಯ ಸೇವಾ ಟ್ರಸ್ಟಿನ ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ, ಐದು ವಲಯಗಳ ಅಧ್ಯಕ್ಷರು ಹಾಗೂ ನೂತನ ಪದಾಧಿಕಾರಿಗಳು, ಮಾಜಿ ಅಧ್ಯಕ್ಷ ಆಲ್ಫೋನ್ಸ್ ಡಿಕೋಸ್ತಾ, ವಲೇರಿಯನ್ ಫೆರ್ನಾಂಡಿಸ್ ಇದ್ದರು.
ನಿಯೋಜಿತ ಅಧ್ಯಕ್ಷ ಸಂತೋಷ್ ಕರ್ನೆಲಿಯೋ ಸ್ವಾಗತಿಸಿದರು. ಕ್ಯಾರಲ್ ಆಳ್ವಾ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.