ಬ್ರಹ್ಮಾವರ: ಸಮೃದ್ಧ ಭಾರತ ನಿರ್ಮಾಣದ ಜವಾಬ್ದಾರಿ ಯುವಜನರ ಕೈಯಲ್ಲಿದೆ. ಆದ್ದರಿಂದ ಯುವಜನರು ಯಾವುದೇ ದುಶ್ಚಟ, ವ್ಯಸನಗಳಿಗೆ ಬಲಿಯಾಗದೆ ಸಮಾಜಮುಖಿಯಾಗಿರಬೇಕು ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಫೌಂಡೇಷನ್ ಅಧ್ಯಕ್ಷ ಮೋಹನ್ ಆಳ್ವ ಹೇಳಿದರು.
ಕೋಟ ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ ವತಿಯಿಂದ ಶುಕ್ರವಾರ ನಡೆದ ಅಭಿಮತ ಸಂಭ್ರಮ ಮತ್ತು ಕಾಳಿಂಗ ನಾವಡರಿಗೆ ಮರಣೋತ್ತರ ‘ಕೀರ್ತಿ ಕಲಶ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದಕ್ಕೂ ಮುನ್ನ ಉದ್ಯಮಿ ಬರೋಡ ಶಶಿಧರ ಶೆಟ್ಟಿ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಸಂಘಟನೆಗಳ ಮೂಲಕ ಸಮಾಜಮುಖಿ ಸೇವಾ ಕಾರ್ಯಗಳು ಸಾಧ್ಯ. ಅಭಿಮತ ಸಂಭ್ರಮದ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆ ಎಲ್ಲ ಸಂಘಟನೆಗಳಿಗೆ ಮಾದರಿ ಎಂದರು.
ಈ ಸಂದರ್ಭದಲ್ಲಿ ಖ್ಯಾತ ಭಾಗವತ ದಿ.ಕಾಳಿಂಗ ನಾವಡರಿಗೆ ಮರಣೋತ್ತರವಾಗಿ ‘ಕೀರ್ತಿ ಕಲಶ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ನಾವಡರ ಪತ್ನಿ ವಿಜಯಶ್ರೀ ನಾವಡ ಪ್ರಶಸ್ತಿ ಸ್ವೀಕರಿಸಿದರು. ಕೃಷಿ ಸಾಧಕ ಗಿಳಿಯಾರು ಭರತ್ ಕುಮಾರ್ ಶೆಟ್ಟಿ, ಉಚಿತ ಆಂಬ್ಯುಲೆನ್ಸ್ ಸೇವೆಯ ಸಾಯಿಬ್ರಕಟ್ಟೆಯ ಜನನಿ ಯುವ ಕನ್ನಡ ಸಂಘಟನೆ, ಕಬಡ್ಡಿಪಟು ರಾಜೇಂದ್ರ ಎಸ್. ಸುವರ್ಣ ಅವರಿಗೆ ಯಶೋಗಾಥೆ ಗೌರವ ನೀಡಿ ಗೌರವಿಸಲಾಯಿತು. ಗಿಳಿಯಾರು ವೀರು ಪೂಜಾರಿ ಅವರಿಗೆ ಗೃಹ ನಿರ್ಮಾಣ ಸಂಕಲ್ಪ ಮಾಡಲಾಯಿತು.
ಕೋಟ ಮಣೂರಿನ ಗೀತಾನಂದ ಫೌಂಡೇಷನ್ ಪ್ರವರ್ತಕ ಆನಂದ ಸಿ.ಕುಂದರ್, ಉದ್ಯಮಿ ಬಡಾಮನೆ ರತ್ನಾಕರ ಶೆಟ್ಟಿ, ಬೇಳೂರು ರಾಘವೇಂದ್ರ ಶೆಟ್ಟಿ, ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಉದಯ ಹೆಗ್ಡೆ ಗಿಳಿಯಾರು ಪನ್ನೀರ್ ಜ್ಯುವೆಲ್ಲರ್ಸ್ ಮುಖ್ಯಸ್ಥ ಪನ್ನೀರ್ ಸೆಲ್ವಂ, ಸಾಂಸ್ಕೃತಿಕ ಚಿಂತಕ ದೀಪಕ್ ಕುಮಾರ್ ಶೆಟ್ಟಿ ಬಾರ್ಕೂರು ಇದ್ದರು.
ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ದಾಮೋದರ ಶರ್ಮಾ ಮತ್ತು ಅವಿನಾಶ ಕಾಮತ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.