ADVERTISEMENT

ಸಿದ್ದಾಪುರ ಏತ ನೀರಾವರಿ ಯೋಜನೆ: ಜನಾಗ್ರಹ ಸಭೆ

ಗ್ರಾ.ಪಂ. ನಿರ್ಣಯ ಧಿಕ್ಕರಿಸಿ ಕಾಮಗಾರಿ ನಿಲ್ಲಿಸುವುದು ಸರಿಯಲ್ಲ: ಪ್ರತಾಪ್‌ಚಂದ್ರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 6:34 IST
Last Updated 22 ಜನವರಿ 2026, 6:34 IST
ಕುಂದಾಪುರ ಸಮೀಪದ ಸಿದ್ದಾಪುರದಲ್ಲಿ ಬುಧವಾರ ನಡೆದ ಜನಾಗ್ರಹ‌ ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಮಾತನಾಡಿದರು
ಕುಂದಾಪುರ ಸಮೀಪದ ಸಿದ್ದಾಪುರದಲ್ಲಿ ಬುಧವಾರ ನಡೆದ ಜನಾಗ್ರಹ‌ ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಮಾತನಾಡಿದರು   

ಕುಂದಾಪುರ: ‘ಸಿದ್ದಾಪುರ ಏತ ನೀರಾವರಿ ಯೋಜನೆಗೆ ಸಂಬಂಧಿಸಿ ನಾಲ್ಕು ಗ್ರಾಮ ಪಂಚಾಯಿತಿಗಳ ನಿರ್ಣಯವನ್ನು ಗೌರವಿಸದೆ ಯಾರೋ ಹೇಳುತ್ತಾರೆ ಎಂದು ಯೋಜನೆಯನ್ನು ನಿಲ್ಲಿಸಲು ಸರ್ಕಾರಕ್ಕೆ ಪತ್ರ ಬರೆಯುವುದು ರಾಜಕೀಯ ದುರಂತ’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಹೇಳಿದರು.

ಸಿದ್ದಾಪುರ ಏತ ನೀರಾವರಿ ಯೋಜನೆಯ ಕಾಮಗಾರಿಗೆ ಸರ್ಕಾರದಿಂದ ತಡೆ ಬಂದಿರುವುದನ್ನು ವಿರೋಧಿಸಿ ಸಿದ್ದಾಪುರದಲ್ಲಿ ಜಿಲ್ಲಾ ರೈತ ಸಂಘ, ಸಿದ್ದಾಪುರ ಏತ ನೀರಾವರಿ ಯೋಜನಾ ವ್ಯಾಪ್ತಿಯ ರೈತರ ನೇತೃತ್ವದಲ್ಲಿ ಬುಧವಾರ ನಡೆದ ಜನಾಗ್ರಹ ಸಭೆಯಲ್ಲಿ ಅವರು ಮಾತನಾಡಿದರು.

ವಾರಾಹಿ ಯೋಜನೆ ವಿಚಾರದಲ್ಲಿ ರೈತರ ಹಿತಾಸಕ್ತಿ ಬಲಿಯಾಗುತ್ತಿದೆ. ರೈತರಿಗೆ ನೀರು ನೀಡಲು ವಿಳಂಬ ಮಾಡಿದಾಗ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಹೋರಾಟ ನಡೆಸಲಾಗಿತ್ತು. ಅದೇ ರೀತಿ ರೈತರ ಹಿತಾಸಕ್ತಿ ಕಾಪಾಡಲು ಯಾವುದೇ ರೀತಿಯ ಸಂಘರ್ಷಕ್ಕೂ ರೈತ ಸಂಘ ಸಿದ್ಧವಿದೆ. ವಾರಾಹಿ ಯೋಜನೆಯ ಕಾಮಗಾರಿಗಳಲ್ಲಿ ಲೋಪ, ಕಳಪೆ ಇದೆ. ಇದೇ ಪರಿಸ್ಥಿತಿ ಸಿದ್ದಾಪುರ ಏತ ನೀರಾವರಿ ಯೋಜನೆಯ ಕಾಮಗಾರಿ ಹಂತದಲ್ಲಿ ಎದುರಾದರೆ ಮೊದಲೇ ಎಚ್ಚೆತ್ತುಕೊಳ್ಳಬೇಕು. ಪಕ್ಷಾತೀತವಾಗಿ ಸಿದ್ದಾಪುರ ಏತ ನೀರಾವರಿ ಹೋರಾಟ ಸಮಿತಿ ರಚನೆ ಮಾಡಿ, ಎಲ್ಲರ ವಿಶ್ವಾಸ ಪಡೆದು ಹೋರಾಟ ಮುಂದುವರಿಸಬೇಕು ಎಂದರು.

ADVERTISEMENT

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಹೋರಾಟ ಮಾಡದೆ ಇದ್ದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಸಿಗದೆ ಹೋಗುವ ಸ್ಥಿತಿ ನಿರ್ಮಾಣವಾಗಬಹುದು. ಅನ್ಯಾಯ, ಸಂಕಷ್ಟಕ್ಕೆ ಒಳಗಾದವರ ಜೊತೆಗೆ ಎಲ್ಲರ ಧ್ವನಿ ಸೇರಿದಾಗ ಮಾತ್ರ ಹೋರಾಟದ ಗುರಿ ಸ್ವಷ್ಟವಾಗುತ್ತದೆ ಎಂದರು.

ನಿವೃತ್ತ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಬೆಳ್ವೆ, ಆಜ್ರಿ ಗ್ರಾ.ಪಂ ಅಧ್ಯಕ್ಷೆ ಮೂಕಾಂಬು, ಉಪಾಧ್ಯಕ್ಷೆ ಗಾಯತ್ರಿ ನಾಯ್ಕ್, ಹೊಸಂಗಡಿ ಗ್ರಾ.ಪಂ ಅಧ್ಯಕ್ಷೆ ಶಾಂತಿ ನಾಯಕ್, ಉಪಾಧ್ಯಕ್ಷೆ ಶಾರದಾ, ಅಂಪಾರು ಗ್ರಾ.ಪಂ ಅಧ್ಯಕ್ಷ ಗೋಪಾಲಕೃಷ್ಣ, ಉಳ್ಳೂರು-74 ಗ್ರಾ.ಪಂ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಕಟ್ಟಿನಬೈಲು, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲ್ಲೂಕು ಸಂಚಾಲಕ ರಾಜು ಬೆಟ್ಟಿನಮನೆ ಇದ್ದರು.

ಕೃಷಿಕರ ಸಮಸ್ಯೆಗಳ ಬಗ್ಗೆ ವಕೀಲ ಉಮೇಶ್ ಶೆಟ್ಟಿ ಶಾನ್ಕಟ್ಟು, ನಿವೃತ್ತ ಅಬಕಾರಿ ಅಧಿಕಾರಿ ಶಿವರಾಮ ಶೆಟ್ಟಿ, ಅಂಪಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ನವೀನ್ ಶೆಟ್ಟಿ ಶಾನ್ಕಟ್ಟು, ಸಿದ್ದಾಪುರ ಗ್ರಾ.ಪಂ ಮಾಜಿ ಅಧ್ಯಕ್ಷ ಶೇಖರ್ ಕುಲಾಲ್, ರೈತಪರ ಹೋರಾಟಗಾರ ಹರ್ಷ ಮೇಲ್ಜಡ್ಡು, ಆಜ್ರಿ ಗ್ರಾ.ಪಂ ಸದಸ್ಯ ಪ್ರವೀಣ್ ಶೆಟ್ಟಿ ಮಾತನಾಡಿದರು.

ಪ್ರಮುಖರಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಎಸ್.ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣೆ, ಜಯರಾಂ ಭಂಡಾರಿ, ಗೋಪಾಲ ಕಾಮತ್ ಡಕ್ಕೇರಬಾಳು, ಎಚ್.ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ರೋಹಿತ್ ಕುಮಾರ್ ಶೆಟ್ಟಿ ತೊಂಬತ್ತು, ವಾಸುದೇವ ಪೈ ಸಿದ್ದಾಪುರ, ಉಮೇಶ್ ಶೆಟ್ಟಿ ಕಲ್ಗದ್ದೆ , ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಕೃಷದೇವ ಕಾರಂತ ಕೋಣಿ, ವಿನೋದ್ ಕ್ರಾಸ್ತಾ, ಮಂಜುನಾಥ ಕುಲಾಲ್, ಕೃಷ್ಣ ಪೂಜಾರಿ ಮತ್ತಿಬೇರು, ಶಾನೋಜ್ ಸಿದ್ದಾಪುರ, ರಾಬಿನ್ ಆಜ್ರಿ, ವಿವಿಧ ಪಕ್ಷ, ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.

ರೋಹಿತ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರವಣ್ ಕುಮಾರ್ ಶೆಟ್ಟಿ ಸಂಪಿಗೇಡಿ ಸ್ವಾಗತಿಸಿದರು. ದಿನೇಶ್ ಪೂಜಾರಿ ಉಳ್ಳೂರು-74 ನಿರೂಪಿಸಿದರು. ಉದಯ್ ಶೆಟ್ಟಿ ರೈತಗೀತೆ ಹಾಡಿದರು. ಪ್ರಸಾದ್ ಶೆಟ್ಟಿ ವಂದಿಸಿದರು.

ಸಭೆಯ ನಂತರ ಮೆರವಣಿಗೆಯಲ್ಲಿ ತೆರಳಿ ಕರ್ನಾಟಕ ನೀರಾವರಿ ನಿಗಮದ (ವಾರಾಹಿ) ಕಚೇರಿಗೆ ಮನವಿ ಸಲ್ಲಿಸಲಾಯಿತು. ಕಾಮಗಾರಿ ತಡೆ ಆದೇಶ ಹಿಂಪಡೆಯುವಂತೆ, ಪ್ರಸ್ತಾವಿತ ಸ್ಥಳದಲ್ಲೇ ಯೋಜನೆ ಮುಂದುವರಿಸಲು ಆಗ್ರಹಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.