ಬ್ರಹ್ಮಾವರ: ಯಕ್ಷಗಾನವು ಭೌದ್ಧಿಕ ವಿಕಸನಕ್ಕೆ ಕಾರಣವಾದ ಕಲೆಯಾಗಿದ್ದು, ಬಾಲ್ಯದಲ್ಲಿ ಯಕ್ಷಗಾನವನ್ನು ಕಲಿಸಿ, ಪ್ರದರ್ಶಿಸಿದರೆ ಮಕ್ಕಳಲ್ಲಿ ಪುರಾಣ ಜ್ಞಾನ ಹೆಚ್ಚುತ್ತದೆ. ಬದುಕಿನಲ್ಲಿ ಸಂಸ್ಕಾರ ಮೂಡುತ್ತದೆ. ಸಾಲಿಗ್ರಾಮ ಮಕ್ಕಳ ಮೇಳವು ಐವತ್ತು ವರ್ಷಗಳಿಂದ ಯಕ್ಷ ಕಲಿಕೆಯ ಮೂಲಕ ಪರಂಪರೆಯನ್ನು ಬೆಳೆಸುತ್ತಿರುವುದು ಶ್ಲಾಘನೀಯ ಎಂದು ಅಖಿಲ ಭಾರತೀಯ ಮಾಧ್ವ ಮಂಡಳದ ಅಧ್ಯಕ್ಷ ಜಿ.ಕೆ.ಶ್ರೀನಿವಾಸ ಹೇಳಿದರು.
ತುಮಕೂರಿನ ಶ್ರೀಕೃಷ್ಣ ಮಂದಿರದ ಸಭಾಂಗಣದಲ್ಲಿ ತುಮಕೂರಿನ ಯಕ್ಷಗಾನ ಸಾಂಸ್ಕೃತಿಕ ವೇದಿಕೆ ಮತ್ತು ಶ್ರೀ ಕೃಷ್ಣ ಮಂದಿರ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಕೋಟ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವ ಸರಣಿ ಕಾರ್ಯಕ್ರಮ ಸುವರ್ಣ ಸನ್ಮಾನ, ಯಕ್ಷಗಾನ ಪ್ರದರ್ಶನದಲ್ಲಿ ಅವರು ಮಾತನಾಡಿದರು.
ಸಾಲಿಗ್ರಾಮ ಮಕ್ಕಳ ಮೇಳದ ಉಪಾಧ್ಯಕ್ಷ ಎಚ್.ಜನಾರ್ದನ ಹಂದೆ ಅಧ್ಯಕ್ಷತೆ ವಹಿಸಿದ್ದರು.
ಶ್ರೀಕೃಷ್ಣ ಮಂದಿರದ ಅಧ್ಯಕ್ಷ ಎಚ್.ಶ್ರೀನಿವಾಸ ಹತ್ವಾರ್, ತುಮಕೂರು ಯಕ್ಷಗಾನ ಸಾಂಸ್ಕೃತಿಕ ವೇದಿಕೆಯ ಪ್ರಧಾನ ಸಂಚಾಲಕ ನಾಗರಾಜ ಧನ್ಯ, ಮಕ್ಕಳ ಮೇಳದ ಪ್ರಾಕ್ತನ ಕಲಾವಿದ ವಿಶ್ವನಾಥ ಉರಾಳ ಭಾಗವಹಿಸಿದ್ದರು.
ತುಮಕೂರಿನಲ್ಲಿ ಯಕ್ಷ ದೀವಿಗೆ ಸಂಸ್ಥೆಯ ಮೂಲಕ ತೆಂಕುತಿಟ್ಟಿನ ಯಕ್ಷಗಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರತಿ ಪಟ್ರಮೆ, ಸಿಬಂತಿ ಪದ್ಮನಾಭ ದಂಪತಿಯನ್ನು ಸುವರ್ಣ ಸನ್ಮಾನದೊಂದಿಗೆ ಗೌರವಿಸಲಾಯಿತು.
ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಸ್ವಾಗತಿಸಿದರು. ಯಕ್ಷಗಾನ ಸಾಂಸ್ಕೃತಿಕ ವೇದಿಕೆಯ ಪ್ರಧಾನ ಸಂಚಾಲಕ ಎಂ.ಅನಂತ ರಾವ್ ವಂದಿಸಿದರು. ಪ್ರಜ್ವಲ್ ಹೆಬ್ಬಾರ್ ನಿರೂಪಿಸಿದರು.
ಬಳಿಕ ಆಯ್ದ ವೃತ್ತಿ ಕಲಾವಿದರಿಂದ ಶಶಿಕಾಂತ ಶೆಟ್ಟಿ ನಿರ್ದೇಶನದಲ್ಲಿ ಶ್ರೀದೇವಿ ವಿಜಯ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.