ADVERTISEMENT

ಶಿಕ್ಷಣ ಕ್ಷೇತ್ರಕ್ಕೆ ಖಾಸಗಿ ಕೊಡುಗೆ ಶ್ಲಾಘನೀಯ: ಟಿ.ಡಿ.ರಾಜೇಗೌಡ

ಡಾ.ಬಿ.ಬಿ.ಹೆಗ್ಡೆ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 3 ಮೇ 2025, 14:15 IST
Last Updated 3 ಮೇ 2025, 14:15 IST
ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಕಾಲೇಜಿನಲ್ಲಿ ಶನಿವಾರ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿದರು
ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಕಾಲೇಜಿನಲ್ಲಿ ಶನಿವಾರ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿದರು   

ಕುಂದಾಪುರ: ಭವಿಷ್ಯದ ಭಾರತದ ಶಿಲ್ಪಿಗಳಾಗಿರುವ ಮಕ್ಕಳಿಗೆ ಯೋಗ್ಯವಾದ ಶಿಕ್ಷಣ ನೀಡುವುದರಿಂದ ಸದೃಢ ರಾಷ್ಟ್ರದ ಗುರಿಯನ್ನು ತಲುಪಲು ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿಯವರ ಕೊಡುಗೆಗಳು ಶ್ಲಾಘನೀಯ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಇಲ್ಲಿನ ಡಾ.ಬಿ.ಬಿ.ಹೆಗ್ಡೆ ಕಾಲೇಜಿನಲ್ಲಿ ಶನಿವಾರ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಶಿಕ್ಷಣ ಪಡೆದುಕೊಳ್ಳಲು ಈ ಹಿಂದೆ ಇದ್ದ ಕಷ್ಟದ ದಿನಗಳು ಇಂದು ಇಲ್ಲ. ವಿದ್ಯಾರ್ಥಿ ದೆಸೆಯಲ್ಲಿ ರಾಜಕೀಯ ಪಕ್ಷದ ನಂಟನ್ನು ಬೆಳೆಸಿಕೊಳ್ಳದೆ, ಒಳ್ಳೆಯ ಶಿಕ್ಷಣದ ಗುರಿಯನ್ನು ಇರಿಸಿಕೊಳ್ಳಬೇಕು. ಜೀವನ ಭದ್ರತೆ ದೊರಕಿದ ಬಳಿಕ, ವೈಯಕ್ತಿಕ ಆಸಕ್ತಿಯಂತೆ ದೇಶದ ಅಭಿವೃದ್ಧಿಗೆ ಪೂರಕವಾದ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರಕಬೇಕು ಎಂಬ ಉದ್ದೇಶದಿಂದ ಕಾಲೇಜು ಸ್ಥಾಪನೆ ಮಾಡಿದ ಸಂಸ್ಥಾಪಕರು ಪ್ರಾತಃ ಸ್ಮರಣೀಯರು ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಎಜುಕೇಷನ್ ಸೊಸೈಟಿ ಅಧ್ಯಕ್ಷ ಬಿ.ಎಂ.ಸುಕುಮಾರ ಶೆಟ್ಟಿ, ಸಮಾಜದ ಕಟ್ಟಕಡೆಯ ಮಕ್ಕಳು ಶಿಕ್ಷಣದ ಅವಕಾಶದಿಂದ ವಂಚಿತರಾಗಬಾರದು ಎಂದು ಈ ಸಂಸ್ಥೆ ಪ್ರಾರಂಭಿಸಲಾಗಿದೆ. ಈ ಶಿಕ್ಷಣ ಸಂಸ್ಥೆಯಿಂದ ಕಲಿತ ಸಾವಿರಾರು ಮಕ್ಕಳು, ಕಾಲೇಜಿನ ನಿರ್ಮಾಣದಲ್ಲಿ ಸಹಕಾರ ನೀಡಿದ ಸೌಕೂರು ಸೇರ್ವೇಗಾರರ ಮನೆಯ ವಿಶಾಲಾಕ್ಷಿ ಬಿ.ಹೆಗ್ಡೆ ಅವರ ಮಡಿಲನ್ನು ಸಾರ್ಥಕತೆ ಭಾವದಿಂದ ತುಂಬಿಸುತ್ತಿದ್ದಾರೆ. ಜಿಲ್ಲೆಯಲ್ಲಿಯೇ ಉತ್ತಮ ಶಿಕ್ಷಣ ಸಂಸ್ಥೆಯಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಕಾಲೇಜಿನ ಸಾಧನೆ ಹಿಂದೆ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ, ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ಶ್ರಮ ಇದೆ ಎಂದರು.

ನಿವೃತ್ತ ಸೇನಾಧಿಕಾರಿ ಗಣೇಶ್ ಅಡಿಗ ಸಾಲಿಗ್ರಾಮ, ಕುಂದಾಪುರ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಕೆ.ಸೀತಾರಾಮ ನಕ್ಕತ್ತಾಯ, ಜೊತೆ ಕಾರ್ಯದರ್ಶಿ ಬಾಂಡ್ಯ ಸುಧಾಕರ ಶೆಟ್ಟಿ, ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯ ರಾಜೇಶ್ ಕೆ.ಸಿ., ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೊವಾಡಿ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದ ಮುಖ್ಯಸ್ಥೆ ನಂದಾ ರೈ ಭಾಗವಹಿಸಿದ್ದರು.

ರಾಜ್ಯ ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷ, ಶಾಸಕ ಟಿ.ಡಿ.ರಾಜೇಗೌಡ, ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಅವರನ್ನು ಗೌರವಿಸಲಾಯಿತು. ಉಪನ್ಯಾಸಕಿ, ಸಾಂಸ್ಕೃತಿಕ ಸಂಯೋಜಕಿ ದೀಪಿಕಾ ಜಿ., ವಿದ್ಯಾರ್ಥಿನಿ ಶ್ರೇಯಾ ಖಾರ್ವಿ ಸಂಸ್ಥಾಪನಾ ಗೀತೆ ಹಾಡಿದರು.

ಪ್ರಾಂಶುಪಾಲ ಪ್ರೊ.ಉಮೇಶ್ ಶೆಟ್ಟಿ ಕೊತ್ತಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶೈಕ್ಷಣಿಕ ಡೀನ್‌ ಗಿರಿರಾಜ್ ಭಟ್ ವಂದಿಸಿದರು, ಉಪನ್ಯಾಸಕಿ ರೇಷ್ಮಾ ಶೆಟ್ಟಿ ನಿರೂಪಿಸಿದರು.

ಪ್ರತಿಯೊಬ್ಬರಿಗೂ ನಮ್ಮ ದೇಶವೇ ಆದ್ಯತೆಯಾಗಬೇಕು. ಜಾತ್ಯತೀತ ಮನೋಭಾವದಿಂದ ಎಲ್ಲರೊಂದಿಗೆ ಒಂದಾಗಿ ಬದುಕುವುದನ್ನು ರೂಢಿಸಿಕೊಳ್ಳಬೇಕು.
–ಟಿ.ಡಿ.ರಾಜೇಗೌಡ, ಶಾಸಕ ಶೃಂಗೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.