ಉಡುಪಿ: ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಸರಳ ಹಾಗೂ ಸಂಪ್ರದಾಯಬದ್ಧವಾಗಿ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ನಡೆಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಹಾಗೂ ಪರ್ಯಾಯೋತ್ಸವ ಸಮಿತಿ ಕಾರ್ಯಾಧ್ಯಕ್ಷರೂ ಆಗಿರುವ ಕೆ.ರಘುಪತಿ ಭಟ್ ತಿಳಿಸಿದರು.
ಭಾನುವಾರ ಕೃಷ್ಣಾಪುರ ಮಠದ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.10ರಂದು ಮಧ್ಯಾಹ್ನ 3 ಗಂಟೆಗೆ ನಗರದ ಜೋಡುಕಟ್ಟೆಯ ಮೂಲಕ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು ಪುರಪ್ರವೇಶ ಮಾಡಲಿದ್ದಾರೆ. ಬಳಿಕ ಪರ್ಯಾಯ ಮೆರವಣಿಗೆಗೆ ಚಾಲನೆ ಸಿಗಲಿದೆ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಕಲಾ ತಂಡಗಳ ಪ್ರದರ್ಶನ, ಟ್ಯಾಬ್ಲೊಗಳು ಇರುವುದಿಲ್ಲ. ಸಂಪ್ರದಾಯದಂತೆ ಚಂಡೆ, ವಾದ್ಯ, ಭಜನೆ, ಸಂಕೀರ್ತನೆ ಇರಲಿದೆ. ತೆರೆದ ವಾಹನದಲ್ಲಿ ಪರ್ಯಾಯ ಶ್ರೀಗಳನ್ನು ರಥಬೀದಿಗೆ ಕರೆತರಲಾಗುವುದು. 200 ಮಂದಿ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಸಂಜೆ 5.20ಕ್ಕೆ ಮೆರವಣಿಗೆ ರಥಬೀದಿ ತಲುಪಲಿದ್ದು, 6ಕ್ಕೆ ಪೌರ ಸಮ್ಮಾನ ಹಾಗೂ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಜ.18ರಂದು ಬೆಳಗಿನ ಜಾವ 2.30ಕ್ಕೆ ಪರ್ಯಾಯ ಮೆರವಣಿಗೆ ಸಂಪ್ರದಾಯದಂತೆ ನಡೆಯಲಿದೆ. ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ದಸರಾ ಮಾದರಿಯಲ್ಲಿ ಸರಳವಾಗಿ ಉಡುಪಿ ಪರ್ಯಾಯ ಮಹೋತ್ಸವ ಆಚರಣೆಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.