ADVERTISEMENT

ಉಡುಪಿ | ಮಳೆ ಮತ್ತಷ್ಟು ಬಿರುಸು, ಆ.8, 9ರಂದು ಭಾರಿ ಮಳೆ ಎಚ್ಚರಿಕೆ‌

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 15:05 IST
Last Updated 5 ಆಗಸ್ಟ್ 2019, 15:05 IST
   

ಉಡುಪಿ: ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಸೋಮವಾರ ರಾತ್ರಿ ಗುಡುಗು ಸಿಡಿಲು ಸಹಿತ ಬಿರುಸಾಗಿ ಮಳೆ ಸುರಿಯಿತು. ಏಕಾಏಕಿ ಗುಡುಗು, ಸಿಡಿಲು, ಗಾಳಿಯ ಅಬ್ಬರ ಕಂಡು ನಾಗರಿಕರು ಬೆಚ್ಚಿಬಿದ್ದರು.

ಸುಮಾರು 1 ತಾಸು ಎಡೆಬಿಡದೆ ಸುರಿದ ಮಳೆ ಅವಾಂತರ ಸೃಷ್ಟಿಸಿತು. ನಗರದ ರಸ್ತೆಗಳೆಲ್ಲ ನೀರಿನಿಂದ ಜಲಾವೃತಗೊಂಡು ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.

ನಗರದ ಬಹುತೇಕ ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ. ಬನ್ನಂಜೆ, ಮೂಡನಿಡಂಬೂರು ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.ಪಡುಬಿದ್ರಿಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು ಕಡಲ್ಕೊರೆತ ಉಂಟಾಗಿದೆ.

ADVERTISEMENT

ಬೈಂದೂರಿನಲ್ಲಿ ಮಧ್ಯಾಹ್ನ ಧಾರಾಕಾರ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡವು.ರಸ್ತೆಗಳ ಮೇಲೆ ನೀರು ಹರಿಯುತ್ತಿತ್ತು. ಉಡುಪಿ, ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಕಾಪು, ಹೆಬ್ರಿ ಭಾಗಗಳಲ್ಲೂ ಉತ್ತಮ ಮಳೆಯಾಗಿದೆ.

ಬೈಂದೂರಿನಲ್ಲಿ ಎರಡು ಮನೆಗಳು ಹಾಗೂ ಬ್ರಹ್ಮಾವರದಲ್ಲಿ ಒಂದು ಮನೆಗೆ ಭಾಗಶಃ ಹಾನಿಯಾಗಿದೆ.ಕಳೆದ 24 ಗಂಟೆಗಳಲ್ಲಿ ಉಡುಪಿ 49, ಕುಂದಾಪುರ 59.1, ಕಾರ್ಕಳ 58 ಮಿ.ಮೀ ಸೇರಿ ಜಿಲ್ಲೆಯಲ್ಲಿ ಸರಾಸರಿ 56.1 ಮಿ.ಮೀ ಮಳೆಯಾಗಿದೆ.

ಭಾರಿ ಮಳೆ: ಎಚ್ಚರಿಕೆ‌

ಆಗಸ್ಟ್‌ 8 ಹಾಗೂ 9ರಂದು ಕರಾವಳಿ ಭಾಗಗಳಲ್ಲಿ 205 ಮಿ.ಮೀ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆ.6,7 ಹಾಗೂ 10ರಂದು 115 ಮಿ.ಮೀ ಗಿಂತ ಹೆಚ್ಚು ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.