
ಉಡುಪಿ: ಶ್ರೀಕೃಷ್ಣನ ಸಂದೇಶವಿರುವ ಭಗವದ್ಗೀತೆಯಲ್ಲಿ ಜೀವನ ಪಾಠವಿದೆ. ಅದು ನಮ್ಮ ಎಲ್ಲ ಸಮಸ್ಯೆಗಳಿಗೆ ಉತ್ತರ ನೀಡಬಲ್ಲುದು ಎಂದು ಒಡಿಯೂರು ಗುರುದೇವ ದತ್ತ ಸಂಸ್ಥಾನದ ಗುರು ದೇವಾನಂದ ಸ್ವಾಮೀಜಿ ಹೇಳಿದರು.
ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಅಂಗವಾಗಿ ಶುಕ್ರವಾರ ನಡೆದ ಸಂತ ಸಂದೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತ್ಯಾಗಮಯ ಜೀವನ ನಮ್ಮದಾಗಬೇಕು. ವ್ಯಕ್ತಿಯ ಬೆಳವಣಿಗೆಗೆ ಭಗವದನುಗ್ರಹ ಅಗತ್ಯ ಎಂದರು.
ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರು ಮಾತನಾಡಿ, ಗುರು- ಹಿರಿಯರನ್ನು ಗೌರವಿಸಿ, ಅವರ ಹಿತ ನುಡಿಗಳನ್ನು ಆಲಿಸಬೇಕು ಎಂದು ಹೇಳಿದರು.
ಜಗತ್ತಿನಲ್ಲಿ ಶೇ 99ರಷ್ಟು ಜನ ಅನುಸರಣೆ ಮಾಡುವವರಾಗಿದ್ದಾರೆ. ಶೇ 1ರಷ್ಟು ಜನರು ಮಾತ್ರ ತಿಳಿದುಕೊಂಡವರಿದ್ದಾರೆ. ಅವರು ದಾರಿ ತಪ್ಪಿದರೆ ಎಲ್ಲರೂ ದಾರಿ ತಪ್ಪುತ್ತಾರೆ. ಇಂದು ಜಗತ್ತು ಮುಂದುವರಿಯುತ್ತಿದೆ ಎಂದು ಹೇಳುತ್ತಾರೆ. ಆದರೆ ಹೊರಗಡೆ ಮುಂದುವರಿಯುತ್ತಿದ್ದರೂ ಒಳಗಡೆ ಕುಸಿಯುತ್ತಿದೆ ಎಂದು ಹೇಳಿದರು.
ಜನರಲ್ಲಿ ವಿಮರ್ಶೆ ಮಾಡುವ ಶಕ್ತಿ ಕುಂಠಿತವಾಗುತ್ತಿದ್ದೆ. ಮೊಬೈಲ್ ಬಂದ ಮೇಲೆ ಯಾರ ಮನಸ್ಸೂ ಕೆಲಸ ಮಾಡುತ್ತಿಲ್ಲ. ಹಾಗಾಗಿ ಬೌದ್ಧಿಕವಾಗಿ ಕುಸಿಯುತ್ತಿದ್ದೇವೆ ಮತ್ತು ಎಲ್ಲದಕ್ಕೂ ಯಂತ್ರಗಳನ್ನು ಅವಲಂಬಿಸುತ್ತಿದ್ದೇವೆ ಎಂದು ತಿಳಿಸಿದರು.
ಮನುಷ್ಯನಿಗೆ ಹುಟ್ಟಿದಾಗಲೇ ಆಗ್ರಹಗಳು ಇರುತ್ತವೆ. ಹಾಗಾಗಿ ಎಲ್ಲಾ ಮತಗಳು ಉಳಿದುಕೊಂಡಿವೆ. ನಮ್ಮ ಮತವೇ ಶ್ರೇಷ್ಠ ಎನ್ನುವವರೇ ಹೆಚ್ಚು. ಸತ್ಯ ಯಾವುದು ಎಂಬುದು ಯಾರಿಗೂ ಬೇಡವಾಗಿದೆ ಎಂದರು.
ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಮಠದ ದಿವಾನ ನಾಗರಾಜ ಆಚಾರ್ಯ, ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು. ಡಾ.ಗೋಪಾಲಾಚಾರ್ಯ ನಿರೂಪಿಸಿದರು.
ಇಂದು ಮನುಷ್ಯ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದ್ದಾನೆ. ಯಾವುದು ಸತ್ಯ ಯಾವುದೇ ಸುಳ್ಳು ಎಂಬುದನ್ನು ಚಿಂತನೆ ಮಾಡುವುದಿಲ್ಲಸುಗುಣೇಂದ್ರತೀರ್ಥ ಸ್ವಾಮೀಜಿ ಪರ್ಯಾಯ ಪುತ್ತಿಗೆ ಮಠಾಧೀಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.