ಹೆಬ್ರಿ: ‘ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ರಾಮ ಮಂದಿರ ಕಟ್ಟುವ ಅಗತ್ಯ ಇಲ್ಲ. ನಮ್ಮ ಮನಸ್ಸಿನಲ್ಲಿ ರಾಮ ಮತ್ತು ರಾಮನ ಆದರ್ಶಗಳು ಇರಬೇಕು. ಎಲ್ಲವೂ ರಾಜಕೀಯಕ್ಕಾಗಿ ನಡೆಯುತ್ತಿದೆ. ಪಿಎಫ್ಐ ನಿಷೇಧ ಸಹಿತ ಎಲ್ಲ ರೀತಿಯ ತಂತ್ರಗಳು ಮುಂದಿನ ಚುನಾವಣೆಗಾಗಿ ನಡೆಯುತ್ತಿವೆ. ರಾಜಕೀಯದವರ ಹಿಂದೆ ಹೋಗಬೇಡಿ, ಹೋದರೆ ನಮ್ಮ ಸಂಸಾರವನ್ನೇ ಅವರು ಹಾಳು ಮಾಡುತ್ತಾರೆ’ ಎಂದುಹಿಂದೂ ಜಾಗರಣ ವೇದಿಕೆಯ ಉಜಿರೆ ಘಟಕದ ಗೌರವಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.
ಕಳ್ತೂರು ಸಂತೆಕಟ್ಟೆ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ವತಿಯಿಂದ ನಡೆದ ಏಳನೇ ವರ್ಷದ ಶಾರದಾ ಮಹೋತ್ಸವದಲ್ಲಿ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
‘ನಮ್ಮನ್ನು ಆಳುವ ಹಿಂದೂ ನಾಯಕರಿಂದಲೇ ಹಿಂದೂ ಸಮಾಜಕ್ಕೆ ಕಂಟಕ ಆಗಿದೆ. ಅವರ ಸ್ವಾರ್ಥಕ್ಕಾಗಿ ಹಿಂದೂ ಸಮಾಜವನ್ನು ಹಾಳು ಮಾಡುತ್ತಿದ್ದಾರೆ. ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ ನಾವೆಲ್ಲರೂ ಕೆಲಸ ಮಾಡಬೇಕಿದೆ. ಸೌಜನ್ಯಳಿಗೆ ನ್ಯಾಯ ದೊರೆತಾಗ ಮಾತ್ರ ಧರ್ಮ ಇದೆ
ಎಂದು ತಿಳಿಯುತ್ತೇನೆ. ಸತ್ಯದ
ಪರವಾದ ನನ್ನ ಹೋರಾಟ ನಿಲ್ಲದು’ ಎಂದರು.
ಕಳ್ತೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸದಾಶಿವ ಕಿಣಿ ಮತ್ತು ಭಾಗವತ ಕಳ್ತೂರು ಮೊಗೆಬೆಟ್ಟು ಮನೋಹರ ಹೆಗ್ಡೆ, ಉಜಿರೆ ಹಿಂದೂ ಜಾಗರಣ ವೇದಿಕೆ ಗೌರವಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ದಾನಿಗಳನ್ನು ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರ ನಡೆಯಿತು.
ಕಳ್ತೂರು ಸಂತೆಕಟ್ಟೆ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಸುರೇಶ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ಸಮಿತಿಯ ಗೌರವಾಧ್ಯಕ್ಷ ಉದಯ ಕುಮಾರ್ ಹೆಗ್ಡೆ ಕಳ್ತೂರು, ಉಪಾಧ್ಯಕ್ಷ ದಿಲೀಪ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿ, ಕೋಶಾಧಿಕಾರಿ ಸಂದೀಪ ನಾಯ್ಕ್ ಕೊಳಗುಡ್ಡೆ, ಸಮಿತಿಯ ಪದಾಧಿಕಾರಿಗಳು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ಉದ್ಯಮಿ ನಾಗರಾಜ ಸೂಡ, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರತಾಪ ಹೆಗ್ಡೆ ಮಾರಾಳಿ, ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಅಧ್ಯಕ್ಷ ಡಾ.ಸುಗ್ಗಿ ಸುಧಾಕರ ಶೆಟ್ಟಿ,
ಗ್ರಾಮ ಪಂಚಾಯಿತಿ ಸದಸ್ಯೆ ಉಷಾ ಪೂಜಾರಿ, ಉದ್ಯಮಿ ಸೀತಾರಾಮ ಹೆಗ್ಡೆ ಕಳ್ತೂರು, ನಾರಾಯಣ ಶೆಟ್ಟಿ ಮೊದಲಾದವರು ಇದ್ದರು.
ಮನೋಜ್ ಕುಮಾರ್ ಶೆಟ್ಟಿ ಮತ್ತು ಮಧುಕರ ಶೆಟ್ಟಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.