ADVERTISEMENT

ಉಡುಪಿ: ಸವಿತಾ ಸ್ತ್ರೀ ಧನ್ ಸಾಲ ವಿತರಣಾ ಯೋಜನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 17:19 IST
Last Updated 9 ಮಾರ್ಚ್ 2021, 17:19 IST

ಉಡುಪಿ: ಶುಭಂ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಸವಿತಾ ಸಮಾಜ ವಿವಿದ್ಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸಹಕಾರದಲ್ಲಿ ಸ್ವಸಹಾಯ ಗುಂಪುಗಳಿಗೆ ಸವಿತಾ ಸ್ತ್ರೀ ಧನ್ ಸಾಲ ವಿತರಣಾ ಯೋಜನೆ ಹಮ್ಮಿಕೊಂಡಿದೆ ಎಂದು ಶುಭಂ ಸಂಸ್ಥೆಯ ಅಧ್ಯಕ್ಷ ಶ್ರೀಧರ್ ಹೆಗ್ಡೆ ತಿಳಿಸಿದರು.‌

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಡುಪಿ, ಕುಂದಾಪುರ, ಕಾರ್ಕಳ ತಾಲ್ಲೂಕುಗಳಲ್ಲಿ ಸವಿತಾ ಸ್ತ್ರೀ ಧನ್ ಸಾಲ ವಿತರಣಾ ಯೋಜನೆಯಡಿ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತದೆ. 10 ಜನರು ಇರುವ ಗುಂಪುಗಳಿಗೆ ₹ 4 ಲಕ್ಷದವರೆಗೂ ಸಾಲ ನೀಡಲಾಗುವುದು. ಗುಂಪಿನ ಸಾಲ ಮರುಪಾವತಿ ಪರಿಗಣಿಸಿ ಸಾಲದ ಮೊತ್ತ ಹೆಚ್ಚಿಸಲಾಗುವುದು ಎಂದು ಹೇಳಿದರು.

ವಿವಿಧ ಸಹಕಾರಿ ಸಂಘಗಳ ಸಹಯೋಗದೊಂದಿಗೆ 963 ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದ್ದು, 34.76 ಕೋಟಿ ಸಾಲ ನೀಡಲಾಗಿದೆ. ಸ್ವಸಹಾಯ ಗುಂಪಿನ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಆಯೋಜಿಸಿದ್ದು, ಪ್ರತಿ ಫಲಾನುಭವಿ ಗರಿಷ್ಠ 50 ಸಾವಿರದವರೆಗೆ ವರೆಗೆ ಆರೋಗ್ಯ ವಿಮೆ ಪಡೆಯಬಹುದು ಎಂದರು.

ADVERTISEMENT

ಸವಿತಾ ಸಮಾಜ ವಿವಿದ್ಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ನವೀನ್‍ಚಂದ್ರ ಭಂಡಾರಿ ಮಾತನಾಡಿ, ಲಾಕ್‌ಡೌನ್ ಅವಧಿಯಲ್ಲಿ ಸಮಾಜದ ವೃತ್ತಿಬಾಂಧವರಿಗೆ ವೈಯಕ್ತಿಕ ಸಾಲದ ಮೇಲಿನ 3 ತಿಂಗಳ ಬಡ್ಡಿ ಮನ್ನಾ ಮಾಡಲಾಗಿದೆ. ₹ 10 ಸಾವಿರದವರೆಗೆ ಆರು ತಿಂಗಳ ಬಡ್ಡಿ ರಹಿತ ಸಾಲ ನೀಡಲಾಗಿದೆ. ಸಲೂನ್ ಕಿಟ್‌ಗಳನ್ನು ನೀಡಲಾಗಿದೆ ಎಂದರು.

ಕ್ಷೌರಿಕ ವೃತ್ತಿ ನಿರತ ಸದಸ್ಯರಿಗೆ ಸಹಕಾರಿಯ ಲಾಭಾಂಶದಲ್ಲಿ ₹ 5,000ದಿಂದ 25000ದವರೆಗೆ ಸಹಾಯಧನ ನೀಡಲು ಯೋಜನೆ ಜಾರಿಗೊಳಿಸಿದ್ದು, ಹಲವರು ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ನವೀನ್‍ಚಂದ್ರ ಭಂಡಾರಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಗೋವಿಂದ ಭಂಡಾರಿ ಅಮ್ಮುಂಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಲತಿ ಅಶೋಕ್ ಭಂಡಾರಿ, ಶುಭಂ ಸಂಸ್ಥೆಯ ಉಪಾಧ್ಯಕ್ಷ ಸುರೇಶ್ ಸಾಲಿಯಾನ್, ಕಾರ್ಯದರ್ಶಿ ಧನಂಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.