ಉಡುಪಿ: ಬ್ರಹ್ಮಗಿರಿ ಸರ್ಕಲ್ನಲ್ಲಿ ಹಾಕಲಾಗಿರುವ ಬ್ಯಾನರ್ನಲ್ಲಿ ‘ಜೈ ಹಿಂದೂ ರಾಷ್ಟ್ರ’ ಎಂಬ ಘೋಷಣೆ ಹಾಕಿರುವುದು ಖಂಡನೀಯ ಎಂದು ಎಸ್ಡಿಪಿಐ ಉಪಾಧ್ಯಕ್ಷ ಶಾಹಿದ್ ಅಲಿ ಆತಂಕ ವ್ಯಕ್ತಪಡಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಸಂವಿಧಾನದಲ್ಲಿ ಹಿಂದೂ ರಾಷ್ಟ್ರದ ಪರಿಕಲ್ಪನೆ ಪ್ರಸ್ತಾಪ ಮಾಡಿಲ್ಲ. ಸಂವಿಧಾನದ ಮೇಲೆ ಶಪಥ ಮಾಡಿ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನಡೆಯುವುದಾಗಿ ಪ್ರಮಾಣ ಮಾಡಿದ ನಾಯಕರು ಹಿಂದೂ ರಾಷ್ಟ್ರ ಪರಿಕಲ್ಪನೆ ಮುನ್ನಲೆಗೆ ತಂದಿರುವುದು ಸರಿಯಲ್ಲ ಎಂದರು.
ಹಿಂದೂ ರಾಷ್ಟ್ರ ಆರ್ಎಸ್ಎಸ್ ಪರಿಕಲ್ಪನೆಯಾಗಿದ್ದು ಹಿಂದೂಗಳ ಮತ ಪಡೆಯುವುದು ಪ್ರಮುಖ ಉದ್ದೇಶವಾಗಿದೆ ಎಂದು ದೂರಿದರು.
ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳಲ್ಲಿ ನಡೆಯುತ್ತಿದ್ದ ಆತಂಕಕಾರಿ ಘಟನೆಗಳು ಕರ್ನಾಟಕದಲ್ಲಿ ನಡೆಯುತ್ತಿವೆ. ಹಿಜಾಬ್ ವಿವಾದ, ಬುಲ್ಡೋಜರ್ ವಿವಾದ, ಸಮಾಜದಲ್ಲಿ ಕೋಮು ದ್ವೇಷ ಬಿತ್ತುವ ಘಟನೆಗಳು ಉಡುಪಿಯಿಂದಲೇ ಆರಂಭವಾಗಿದ್ದು ವಿಷಾದನೀಯ. ಪ್ರೀತಿ, ಸೌಹಾರ್ದದ ನೆಲದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವುದು ದುರಂತ ಎಂದರು.
ವಿವಾದಿತ ಬ್ಯಾನರ್ ಅನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.