ಉಡುಪಿ: ನವೀಕರಿಸಬಹುದಾದ ಇಂಧನದಲ್ಲಿ ದೇಶದ ಭವಿಷ್ಯ ಅಡಗಿದ್ದು, ಸೌರ ವಿದ್ಯುತ್ ಉತ್ಪಾದನೆಗೆ ರಾಜ್ಯ ಸರ್ಕಾರ ಒತ್ತು ನೀಡಲಿದೆ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ನಲ್ಲಿ ಶುಕ್ರವಾರ ‘ಬಿ-ಸೇಫ್’ ಸೆಂಟರ್ ಫಾರ್ ಎಕ್ಸ್ಲೆನ್ಸ್ ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಸಂಸ್ಥೆಗಳು ಹಾಗೂ ಸರ್ಕಾರದ ಸಹಭಾಗಿತ್ವದಲ್ಲಿ ಉತ್ತಮ ಕಾರ್ಯಗಳನ್ನು ಮಾಡುವ ಅವಕಾಶವಿದೆ. ಸೌರ ವಿದ್ಯುತ್ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಬಹುದು ಎಂದರು.
ಉತ್ತಮ ಆಡಳಿತದ ಬಗ್ಗೆ ಮಾಹಿತಿ ಕೊರತೆ ಕಾರಣ ಭ್ರಷ್ಟಾಚಾರ ಹಾಗೂ ಕಾಮಗಾರಿಗಳಲ್ಲಿ ವಿಳಂಬವಾಗುತ್ತಿದೆ. ಎಲ್ಲ ಸಮಸ್ಯೆಗಳಿಗೆ ಉತ್ತಮ ಆಡಳಿತ ಪರಿಹಾರವಾಗಬಲ್ಲದು ಎಂದು ಅಭಿಪ್ರಾಯಪಟ್ಟರು.
ಸೆಲ್ಕೋ ಸೋಲಾರ್ ವ್ಯವಹಾರ ₹ 20 ಕೋಟಿ ಇದ್ದು, ₹ 50 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಸರ್ಕಾರದ ಜತೆಗೂಡಿ ಕೆಲಸ ಮಾಡುವ ಉದ್ದೇಶವಿದೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಜತೆಯಾಗಿ ಗ್ರಾಾಮೀಣ ಭಾಗದ ಮನೆಗಳಿಗೆ ಸೋಲಾರ್ ವಿದ್ಯುತ್ ನೀಡಲಾಗುತ್ತಿದೆ ಎಂದು ಟ್ರಸ್ಟ್ನ ಆಡಳಿತ ಟ್ರಸ್ಟಿ ಟಿ.ಅಶೋಕ್ ಪೈ ತಿಳಿಸಿದರು.
ಗೃಹ ಬಳಕೆ ಸೋಲಾರ್ ವಿದ್ಯುತ್ ಮೇಲೆ ಹಿಂದಿದ್ದ ಶೇ 5ರಷ್ಟು ಜಿಎಸ್ಟಿಯನ್ನು ಶೇ 12ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಬಡವರಿಗೆ ದೊಡ್ಡ ಹೊರೆಯಾಗಿದ್ದು ಜಿಎಸ್ಟಿ ಕಡಿಮೆ ಮಾಡಬೇಕು ಎಂದು ಸೆಲ್ಕೊ ಸೋಲಾರ್ ಲೈಟ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮೋಹನ ಭಾಸ್ಕರ ಹೆಗಡೆ ಸಚಿವ ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಉಡುಪಿ ಕೆನರಾ ಬ್ಯಾಂಕ್ ಆರ್ಒ 1ರ ಉಪ ಮಹಾ ಪ್ರಬಂಧಕಿ ಲೀನಾ ಪಿಂಟೋ, ಬಿವಿಟಿ ಟ್ರಸ್ಟಿ ವಿನೂತಾ ಆಚಾರ್ಯ ಇದ್ದರು. ಸುಧೀರ್ ಜಿ.ಕುಲಕರ್ಣಿ ಸ್ವಾಗತಿಸಿದರು. ಶ್ರದ್ಧಾ ವಂದಿಸಿದರು. ಬಿವಿಟಿ ಅಧಿಕಾರಿ ಪ್ರತಿಮಾ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.