ಉಡುಪಿ: ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಹೆತ್ತ ಕಂದಮ್ಮನನ್ನು ಉಳಿಸಿಕೊಳ್ಳಲು ಸಾಧ್ಯವಾಗದ ದಂಪತಿ, ಸಮಾಜದಿಂದ ಪಡೆದ ಆರ್ಥಿಕ ನೆರವನ್ನು ಮರಳಿ ಸಮಾಜಕ್ಕೆ ನೀಡಿ ಮಾದರಿಯಾಗಿದೆ.
ಮಾರ್ಪಳ್ಳಿಯ ಸಂದೀಪ್ ಹಾಗೂ ರಂಜಿತಾ ದಂಪತಿಯ 6 ತಿಂಗಳ ಮಗು ಸ್ಪೈನಲ್ ಮಸ್ಕುಲರ್ ಅಟ್ರೊಫಿ ಎಂಬ ವಿರಳಾತಿ ವಿರಳ ಕಾಯಿಲೆಯಿಂದ ಬಳಲುತ್ತಿತ್ತು. ಮಗುವಿನ ಚಿಕಿತ್ಸೆಗೆ ₹ 16 ಕೋಟಿ ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು. ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿರುವ ಸಂದೀಪ್ ಹಣ ಹೊಂದಿಸಲಾಗದೆ ಸಮಾಜದಿಂದ ನೆರವು ಕೋರಿದ್ದರು.
₹ 38 ಲಕ್ಷ ಸಂಗ್ರಹವಾಗುವಷ್ಟರಲ್ಲಿ ಮಗು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿತು. ಮಗುವಿನ ಅಗಲಿಕೆಯ ನೋವಿನ ಮಧ್ಯೆಯೂ ಸಮಾಜದಿಂದ ಪಡೆದ ನೆರವನ್ನು ಸಮಾಜಕ್ಕೆ ಮರಳಿಸುವ ನಿರ್ಧಾರ ಮಾಡಿರುವ ದಂಪತಿ ಮಲ್ಪೆಯ ಸಮಾಜ ಸೇವಕ ಈಶ್ವರ್ ಅವರಿಗೆ ₹ 7 ಲಕ್ಷ ವೆಚ್ಚದಲ್ಲಿ ಆಂಬುಲೆನ್ಸ್ ನೀಡಿದ್ದಾರೆ. ಜತೆಗೆ 18 ಬಡ ರೋಗಿಗಳ ₹ 13 ಲಕ್ಷ ಚಿಕಿತ್ಸಾ ವೆಚ್ಚ ಭರಿಸಿದೆ. ಉಳಿದ ಹಣವನ್ನು ಮತ್ತಷ್ಟು ರೋಗಿಗಳ ಚಿಕಿತ್ಸೆಗೆ ವ್ಯಯ ಮಾಡುವುದಾಗಿ ಸಂದೀಪ್ ತಿಳಿಸಿದ್ದಾರೆ.
ಈಚೆಗೆ ಮಲ್ಪೆಯ ಫಿಶರಿಸ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಗು ಮಿಥಾಂಶ್ ಎಸ್.ದೇವಾಡಿಗ ಸ್ಮರಣಾರ್ಥ ಆಂಬುಲೆನ್ಸ್ ಹಸ್ತಾಂತರ ಹಾಗೂ ಬಡ ರೋಗಿಗಳ ಚಿಕಿತ್ಸಾ ವೆಚ್ಚಕ್ಕೆ ಆರ್ಥಿಕ ನೆರವು ನೀಡುವ ಕಾರ್ಯಕ್ರಮ ನಡೆಯಿತು. ಸಂದೀಪ್ ಹಾಗೂ ರಂಜಿತಾ ದಂಪತಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.