ಉಡುಪಿ: ಸಮಾಜವನ್ನು ಹೊಲಿಯುವವರು ಬೇಕು, ತುಂಡರಿಸುವವರು ಬೇಡ. ಇಂದು ಸಮಾಜವನ್ನು ಒಗ್ಗೂಡಿಸುವ ಕೆಲಸವಾಗಬೇಕು ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು.
ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಜಿಲ್ಲಾ ಸಮಿತ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಜತ ಸಂಭ್ರಮ ಹಾಗೂ ಟೈಲರ್ಸ್ ವೃತ್ತಿ ಬಾಂಧವರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಸಂಘಟನೆಯಿಂದ ಟೈಲರ್ ವೃತ್ತಿಯ ರಕ್ಷಣೆ ಮತ್ತು ಪ್ರಗತಿ ಸಾಧ್ಯವಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಟೈಲರ್ ಬಾಂಧವರ ಬೇಡಿಕೆಗಳಿಗೆ ಸಂಬಂಧಿಸಿ ವಿಧಾನಸಭೆಯಲ್ಲಿ ಮಾತನಾಡಿದ ಮಾತ್ರಕ್ಕೆ ನಿಮ್ಮ ಸಮಸ್ಯೆ ಬಗೆಹರಿಯದು. ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಚರ್ಚಿಸಬೇಕು. ನಿಮ್ಮ ಬೇಡಿಕೆಗಳ ಕುರಿತು ಸಚಿವರಲ್ಲಿ ಚರ್ಚಿಸಲು ನಾನೂ ಬರುತ್ತೇನೆ ಎಂದರು.
ಪ್ರಧಾನ ಕಾರ್ಯದರ್ಶಿ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿ ಮಾತನಾಡಿ, ಸರ್ಕಾರವು ನಮ್ಮ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಟೈಲರ್ ವೃತ್ತಿಯವರಿಗೂ ಜೀವನ ಭದ್ರತೆ ಒದಗಿಸಬೇಕು ಎಂದು ಹೇಳಿದರು.
ಟೈಲರ್ ವೃತ್ತಿ ಬಾಂಧವರಿಗೆ ಭವಿಷ್ಯ ನಿಧಿ ಜಾರಿಗೊಳಿಸಬೇಕು, ನೆರೆ ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿರುವಂತೆ ನಾವು ಕೂಡ ಮಾಸಿಕ ₹100 ಪಾವತಿ ಮಾಡಲು ಸಿದ್ಧರಿದ್ದೇವೆ ಅದನ್ನು ಟೈಲರ್ ಕಾರ್ಮಿಕ ಕಲ್ಯಾಣ ನಿಧಿಗೆ ಬಳಸಬಹುದಾಗಿದೆ ಎಂದು ತಿಳಿಸಿದರು.
ಜವಳಿ ಉದ್ಯಮದ ಅಭಿವೃದ್ಧಿಯಲ್ಲಿ ಟೈಲರ್ಗಳ ಪಾತ್ರ ಮಹತ್ವದ್ದಾಗಿದೆ. ಸರ್ಕಾರ ಜವಳಿ ಉತ್ಪನ್ನಗಳಾದ ಬಟ್ಟೆಗಳು, ಸಿದ್ಧ ಉಡುಪುಗಳು, ಹೊಲಿಗೆ ಯಂತ್ರ, ದಾರ ಮೊದಲಾದವುಗಳ ಮೇಲೆ ಸೆಸ್ ವಿಧಿಸಿ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯ ರೀತಿಯಲ್ಲಿ ನಮ್ಮ ಸಂಘಟನೆಗೂ ಸವಲತ್ತುಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಟೈಲರ್ಗಳ ಕ್ಷೇಮಾಭಿವೃದ್ಧಿಗಾಗಿ ಪ್ರತ್ಯೇಕ ಮಂಡಳಿ ಮೂಲಕ ಟೈಲರ್ ವೃತ್ತಿಯ ಕಾರ್ಮಿಕರಿಗೆ ಮಾಸಾಶನ, ವೃದ್ಧಾಪ್ಯ ವೇತನ, ಶಿಷ್ಯವೇತನ ಆರೋಗ್ಯ ವಿಮೆ ಮೊದಲಾದ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ರಾಜ್ಯ ಸಮಿತಿ ಅಧ್ಯಕ್ಷ ಬಿ.ಎ. ನಾರಾಯಣ ಮಾತನಾಡಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಗುರುರಾಜ್ ಎಂ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಮಚಂದ್ರ, ಪ್ರಜ್ವಲ್ ಕುಮಾರ್, ಶಾಂತಾ ಬಸ್ರೂರು, ಸುರೇಶ್ ಪಾಲನ್ ಭಾಗವಹಿಸಿದ್ದರು.
ಟೈಲರ್ ವೃತ್ತಿ ಬಾಂಧವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಟೈಲರ್ಸ್ ಕ್ರೆಡಿಟ್ ಕೋ ಆಪರೇಟಿವ್ ಸಿಬ್ಬಂದಿಗೆ ಸನ್ಮಾನ
ಭಗವದ್ಗೀತೆಯನ್ನು ಓದುವುದು ಮತ್ತು ಬರೆದರೆ ಸಾಲದು. ಅದರ ಮೌಲ್ಯಗಳು ಆಚರಣೆಯಲ್ಲಿ ಬಂದಾಗ ಮಾತ್ರ ಸಮಾಜದಲ್ಲಿ ಸ್ವಾಸ್ಥ್ಯ ನೆಲೆಸಲು ಸಾಧ್ಯ
- ಜಯಪ್ರಕಾಶ್ ಹೆಗ್ಡೆ ಮುಖಂಡ
ಹೊಲಿಯುವ ವೃತ್ತಿಯು ಪ್ರಾಚೀನ ವೃತ್ತಿಯಾಗಿದೆ. ವೇದ ಕಾಲದಿಂದಲೂ ಈ ವೃತ್ತಿ ಇದೆ. ಈ ವೃತ್ತಿಯನ್ನು ಜನರ ಪ್ರೀತಿಯ ಕೆಲಸ ಎಂದು ನಿರ್ವಹಿಸಿ
-ಸುಗುಣೇಂದ್ರತೀರ್ಥ ಪುತ್ತಿಗೆ ಮಠಾಧೀಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.